ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶಿವಮೊಗ್ಗ ಕೋರ್ಟ್‌ನ ಪ್ರಥಮ ಮಹಿಳಾ ನ್ಯಾಯವಾದಿ, ಹೋರಾಟಗಾರರು – ದುರ್ಬಲರ ಮಹಾತಾಯಿ ಮಂಜುಳಾ ಮೇಡಂ ಯುಗಾಂತ್ಯ…

Share Below Link

ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾವಾದಿ ಹಾಗೂ ಜನಪರ ಹೋರಾಟಗಾರ್ತಿಯಾದ ಮಂಜುಳದೇವಿ (೬೯) ಅವರು ನಮ್ಮನ್ನು ಅಗಲಿzರೆ. ೧೯೭೬ ರಲ್ಲಿ ವಕೀಲ ವೃತ್ತಿ ಆರಂಭಿಸಿದ ಇವರು, ಖ್ಯಾತ ಮನೋವೈದ್ಯ ದಿವಂಗತ ಡಾ| ಅಶೋಕ್ ಪೈ ಅವರ ತಂದೆಯವರಾದ ವಕೀಲ ಕಟಿಲ್ ಅಪ್ಪು ಪೈ ಅವರ ಜೂನಿಯರ್ ಆಗಿ ವೃತ್ತಿ ಆರಂಭಿಸಿದ್ದರು.
ಮಂಜುಳಾದೇವಿ ಅವರು ವಿಶೇಷವಾಗಿ ಸಮಾಜಮುಖಿ ಚಿಂತನೆ ಹೊಂದಿದವರು. ಪುರುಷ ಪ್ರಧಾನ ಸಮಾಜದಲ್ಲಿ ಓರ್ವ ಮಹಿಳೆ ಪುರುಷರಿಗೆ ಸರಿಸಮಾನವಾಗಿ ಬೆಳೆಯುವುದು ಸುಲುಭದ ಮಾತಲ್ಲ. ವೃತ್ತಿಯಲ್ಲೂ ಸಕ್ರಿಯವಾಗಿದ್ದ ಇವರು ಸಮಾಜಿಕ ಚಟುವಟಿಕೆಗಳಲ್ಲೂ ಸದಾ ಮುಂದೆ ಇರುತ್ತಿದ್ದರು.
ಜಿಲ್ಕಾ ಪಂಚಾಯತ್ ಮತ್ತು ಹಲವು ಬ್ಯಾಂಕ್ ಹಾಗೂ ವಿಮಾ ಕಂಪನಿಗಳಿಗೆ ಕೆಲವು ಕಾಲ ಕಾನೂನು ಸಲಹೆಗಾರರಾಗಿದ್ದರು. ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಅವರ ಸಂಬಂಧಿಯಾದ ಮಂಜುಳಾದೇವಿಯವರು ರಾಜಕೀಯವಾಗಿ ಪ್ರಭಾವ ಹೊಂದಿದವರಾದರೂ ತನಗಾಗಿ ಏನನ್ನು ಮಾಡಿಕೊಂಡವರಲ್ಲ . ಅಸಾಯಕರು ಮತ್ತು ದುರ್ಬಲರ ಬಗ್ಗೆ ಕಾಳಜಿ ಹೊಂದಿದ್ದ ಮಂಜುಳಾದೇವಿಯವರು ಕೊಡುಗೈ ದಾನಿಯಾಗಿದ್ದರು.
ಗಾಂಧಿವಾದಿ ಮತ್ತು ವಿನೋಭಾಭಾವೆ ಸಂಪರ್ಕದಲ್ಲಿದ್ದ ಸ್ವತಂತ್ರ ಹೋರಾಟಗಾರ್ತಿ ಪೊನ್ನಮಾಳ್ ಅವರ ಅಪ್ಪಟ ಶಿಷ್ಯೆಯಾಗಿದ್ದ ಮಂಜುಳ ಮೇಡಂ, ತುಂಗಾಮೂಲ ಸೇರಿದಂತೆ ಹಲವು ಪರಿಸರ ಹೋರಾಟಗಳಲ್ಲಿ ಮತ್ತು ಕೋಮು ಸೌರ್ಹಾದದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. ಶಾಲಾ ಗೇಣಿ ಜಮೀನು ಭೂ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದವರು.
ದೇಶದ ಇತಿಹಾಸದಲ್ಲಿಯೇ ಹತ್ತು ವರ್ಷಕ್ಕೂ ಹೆಚ್ವುಕಾಲ ಸುದೀರ್ಘವಾಗಿ ನಡೆದ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ನಮ್ಮಗಳೊಂದಿಗೆ ಸದಾ ಗಟ್ಟಿಯಾಗಿ ನಿಂತವರು. ಆ ಹೋರಾಟದಲ್ಲಿ ಅವರದೊಂದು ಟಾಟಾ ಕಂಪನಿಯ ಉದ್ದನೆಯ ಕಾರು ನಮಗೆ ಏಕೈಕ ವಾಹನ, ಅದರಲ್ಲಿ ಹೋರಾಟಕ್ಕೆ ಬರುವ ಜನರೊಂದಿಗೆ ಹೋರಾಟದ ಸಾಮಾಗ್ರಿಗಳನ್ನು ತುಂಬಿಕೊಂಡು ಹೋಗುತ್ತಿದ್ದೇವು. ಆಂಧ್ರ ಮತ್ತು ಕರ್ನಾಟಕ ಎರಡು ರಾಜ್ಯದ ಜೀವನದಿಗಳಾದ ತುಂಗಾ ಮತ್ತು ಭದ್ರಾನದಿ ಉಳಿಸುವ ಹೋರಾಟದ ಮುಖ್ಯ ರುವಾರಿ ಕಲ್ಕುಳಿ ವಿಠಲ್ ಹೆಗ್ಡೆ ಮತ್ತು ಜನಪರ ಸಂಘಟನೆಗಳಾದರೆ ನಂತರ ಈ ಹೋರಾಟಕ್ಕೆ ಕಡಿದಾಳು ಶಾಮಣ್ಣ, ಸುಂದಾರಲಾಲ್ ಬಹುಗುಣ, ಯು.ಆರ್. ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ ಈ ರೀತಿ ಹಲವು ಪ್ರಸಿದ್ದರು ಪಾಲ್ಗೊಂಡರು.
ಈ ಹೋರಾಟದಲ್ಲಿ ಮೊದಲಿಂದ ಕೊನೆಯವರೆಗೂ ಜೊತೆಗಿದ್ದು ಕಾರ್ಯಕ್ರಮಗಳಿಗೆ ಹಣ ಸಂಗ್ರಹದಿಂದ ಹಿಡಿದು ಎ ಕಾರ್ಯಕ್ಕೂ ಜೊತೆಗೆ ಬರುತ್ತಿದ್ದ ಮಂಜುಳಾದೇವಿಯವರು ನಮಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಕೊಡಿಸುತ್ತಿದ್ದವರು. ಮಹಿಳಾ ಜಾಗೃತಿಯ ಹೆಣ್ಣುಮಕ್ಕಳಿಗೆ ಮಂಜುಳಾದೇವಿ ಆಶ್ರಯದಾತೆಯಂತೆ ನಡೆದುಕೊಂಡವರು.
ಸದಾ ಮಹಿಳೆಯರು ಮಕ್ಕಳ ಬಗ್ಗೆ ಅಪಾರ ಕಾಳಜಿಹೊಂದಿದ್ದ ಮಂಜುಳಾದೇವಿಯವರು ನಿಸ್ವಾರ್ಥ ಸೇವೆಯನ್ನು ಕೊನೆಯವರೆಗೂ ಮಾಡಿಕೊಂಡು ಬಂದರು. ಹೊರಾಟಗಾರ ಈಸೂರು ಲೋಕೇಶ್‌ರವರಿಗೆ ಜೂನಿಯರ್ ಆಗಿ ಸೇರಿಸಿ ಕೊಂಡು ಕೊಟ್ ಸಹ ಹೊಲೆಸಿಕೊಟ್ಟು ಎನ್‌ರೊಲ್ ಮಾಡಿಸಲು ಹಣವನ್ನು ಸಹ ನೀಡಿ ಪ್ರೋತ್ಸಾಹಿಸಿದ್ದ ಮಾತೃಹೃದಯಿ ಅವರಾಗಿದ್ದರು. ಹೋರಾಟದ ಕಾರ್ಯಕ್ರಮಗಳ ದೇಣಿಗೆ ಸಂಗ್ರಹ ಮಾಡಲು ನಮಗೆ ಮಂಜುಳಾದೇವಿಯವರೇ ಲೀಡರ್. ಅವರ ಮನೆಯಲ್ಲಿ ಅವರಿಗೆ ಕಲೆಕ್ಷನ್ ಕಾಳಮ್ಮ ಎಂದು ತಮಾಷೆ ಮಾಡುತ್ತಿದ್ದರು.
ನೂರಾರು ಹೋರಾಟಗಳಲ್ಲಿ ನಮ್ಮೊಂದಿಗೆ ಭಾಗವಹಿಸಿದ್ದ ಮಂಜುಳಾದೇವಿಯವರು ಎಂದಿಗೂ ಯಾರ ಮೇಲು ಕೋಪ ಗೊಂಡವರಲ್ಲ. ಜೊತೆಯಲ್ಲಿದವರಿಗೆ ತಾಯಿಪ್ರೀತಿ ನೀಡಿದವರು. ಆರ್ಥಿಕವಾಗಿ ಅನುಕೂಲವಾಗಿದ್ದ ಇವರು, ಹೋರಾಟಕ್ಕಾಗಿ ತನ್ನ ಕೈಯಿಂದಲೇ ಹಣ ಖರ್ಚುಮಾಡಿಕೊಂಡವರು. ಕಷ್ಟ ಎಂದವರಿಗೆ ತನ್ನ ಒಡವೆಯನ್ನೆ ಮಾರಿ ಹಣ ನೀಡಿದ ಮಹಾ ತಾಯಿ ಮಂಜುಳಾದೇವಿ.
ರಾಜಕಾರಣದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ ಇವರು, ಜನತಾಪಕ್ಷ ಮತ್ತು ಜನತಾದಳ, ಸಂಯುಕ್ತ ಜನತಾದಳದಲ್ಲಿ ಕೆಲಸ ಮಾಡಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯಾರ್ಥಿಯು ಆದವರು. ಕಳೆದೆರಡು ವರ್ಷದಿಂದ ಕಾಡಿದ ಕ್ಯಾನ್ಸರ್ ರೋಗ ಇವರನ್ನು ಮತ್ತೆ ಚೇತರಿಸಿಕೊಳ್ಳಲು ಬಿಡಲೇ ಇಲ್ಲ. ಸದಾ ಸಮಾಜಮುಖಿಯಾಗಿ, ಪ್ರಮಾಣಿಕರಾಗಿ ಬದುಕ್ಕಿದ್ದ ಮಂಜುಳ ದೇವಿ ಮೇಡಂ ಹೆಸರು ಸದಾ ಚಿರಾಯವಾಗಲಿ.
ಕೆ.ಪಿ. ಶ್ರೀಪಾಲ., ವಕೀಲರು