ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಸೇವೆ ನೀಡಿ…

Share Below Link

ಶಿಕಾರಿಪುರ: ಸರ್ಕಾರಿ ಆಸ್ಪತ್ರೆ ಗಳು ಖಾಸಗಿ ಆಸ್ಪತ್ರೆಗೆ ಸಮಾನ ರೀತಿಯ ವ್ಯವಸ್ಥೆಯನ್ನು ಹೊಂದಿದ್ದು, ರೋಗಿಗಳಿಗೆ ಸಕಾಲ ದಲ್ಲಿ ಸೂಕ್ತ ಸೇವೆಯನ್ನು ಸಲ್ಲಿಸುವ ಜತೆಗೆ ಸಹಾನುಭೂತಿಯಿಂದ ವರ್ತಿಸಿ ಜನಪ್ರತಿನಿಧಿಗಳ ಗೌರವ ಕಾಪಾಡುವಂತೆ ಕ್ಷೇತ್ರದ ನೂತನ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನಾದ್ಯಂತ ಪ್ರಾಥಮಿಕ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ದಿಸೆಯಲ್ಲಿ ಯಾವುದೇ ಪ್ರಾಥಮಿಕ ಕೇಂದ್ರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತಾರತಮ್ಯವಾಗದ ರೀತಿ ಯಲ್ಲಿ ಸರ್ವ ರೀತಿಯಲ್ಲಿ ಸೌಲಭ್ಯ ವನ್ನು ಕಲ್ಪಿಸಲಾಗಿದ್ದು ಸರ್ಕಾರದ ಸೌಲಭ್ಯ ಪಡೆಯುವುದು ಪ್ರತಿಯೊಬ್ಬರ ಹಕ್ಕು ಈ ದಿಸೆಯಲ್ಲಿ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗ ನಿರ್ಲಕ್ಷ್ಯ ವಹಿಸದೆ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಯನ್ನು ನೀಡುವಂತೆ ಸೂಚಿಸಿದರು.


ಆರ್ಥಿಕ ದುರ್ಬಲರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಗುಣಮಟ್ಟದ ಸೇವೆಗಾಗಿ ವೈದ್ಯಾಧಿಕಾರಿಗಳ ಕೊರತೆ ನೀಗಿಸಿ ಎಲ್ಲ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು ವಿನಾಕಾರಣ ರೋಗಿಗಳಿಗೆ ಖಾಸಗಿ ಆಸ್ಪತ್ರೆ, ಪರಸ್ಥಳಕ್ಕೆ ಶಿಫಾರಸು ಮಾಡದೆ ದೇವರು ಮೆಚ್ಚುವ ರೀತಿಯಲ್ಲಿ ಉತ್ತಮ ಸೇವೆ ಸಲ್ಲಿಸುವಂತೆ ತಿಳಿಸಿದರು.
ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಸಂಸದರು, ಶಾಸಕರು ರಾಜ್ಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಲಿದೆ ಎಂಬುದನ್ನು ಗಮನದಲ್ಲಿಟ್ಟು ಕೊಂಡು ಜಾಗ್ರತೆಯಿಂದ ವರ್ತಿಸುವಂತೆ ಎಚ್ಚರಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಾನಂದ್ ಮಾತನಾಡಿ, ನಿತ್ಯ ಆಸ್ಪತ್ರೆಗೆ ಸಾವಿರಕ್ಕೂ ಅಧಿಕ ಹೊರರೋಗಿಗಳು ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ೧೭೦ ರಿಂದ ೨೦೦ ರೋಗಿಗಳು ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ ಹೆರಿಗೆ ಸಹಿತ ೪೦-೫೦ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ೪ ಡಯಾಲಿಸಿಸ್ ಯಂತ್ರದಿಂದ ನಿತ್ಯ ೨೦ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರ ಸಹಿತ ೨೪೫ಕ್ಕೂ ಹೆಚ್ಚಿನ ವೈದ್ಯ ಸಿಬ್ಬಂದಿಗಳು ನಿತ್ಯ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾಸಕರ ಗಮನ ಸೆಳೆದರು.


ರಕ್ತ ನಿಧಿ ಕೇಂದ್ರ, ಸಿ.ಟಿ ಸ್ಕ್ಯಾನ್ ಯಂತ್ರ ಅಳವಡಿಕೆಗೆ ಪತ್ರ ವ್ಯವಹಾರ ನಡೆಸಲಾಗಿದ್ದು, ಪ್ಯಾರಾಮೆಡಿಕಲ್, ಲ್ಯಾಬ್ ಟೆಕ್ನಿಷಿಯನ್, ಎಕ್ಸ್ ರೇ ಕೋರ್ಸ್ ಆರಂಭದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ತಿಳಿಸಿ ಲಕ್ಷ್ಯ ಯೋಜನೆಯಡಿ ಮಾನ್ಯತೆ ಪಡೆದು ವಾರ್ಷಿಕ ರೂ.೪ ಲಕ್ಷ ಹೆಚ್ಚುವರಿ ಅನುದಾನ ಪಡೆಯುತ್ತಿರುವ ಹೆಮ್ಮೆ ಆಸ್ಪತ್ರೆಗಿದೆ. ಸರ್ಕಾರದ ಅನುದಾನ ಕೊರತೆಯಾದಲ್ಲಿ ಇತರೆ ಮೂಲ ಗಳಿಂದ ಖಾಸಗಿಯಾಗಿ ಔಷಧ ಗಳನ್ನು ಖರೀದಿಸಿ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾಳಜಿ ವಹಿಸುತ್ತಿರುವುದಾಗಿ ತಿಳಿಸಿದರು.
ತುರ್ತು ಚಿಕಿತ್ಸೆಗೆ ಔಷಧಾಲಯ ದಲ್ಲಿ ಕನಿಷ್ಠ ೧೬೮ ಔಷಧಿಗಳ ಅಗತ್ಯವಿದ್ದು ಆಸ್ಪತ್ರೆಯಲ್ಲಿ ೩೫೨ ಔಷಧಗಳ ಸಂಗ್ರಹವಿದೆ ಎಂದು ತಿಳಿಸಿದ ವೈದ್ಯಾಧಿಕಾರಿಗಳು ನಿತ್ಯ ಸಹಸ್ರಾರು ರೋಗಿಗಳ ಭೇಟಿ ಯಿಂದಾಗಿ ಆಸ್ಪತ್ರೆಯಲ್ಲಿ ವಾಹನ ನಿಲ್ದಾಣದ ಸಮಸ್ಯೆ ಕಾಡುತ್ತಿದೆ ಎಂದು ತಿಳಿಸಿದರು.


ಕೂಡಲೇ ಶಾಸಕರು ಆಸ್ಪತ್ರೆ ಯಲ್ಲಿನ ತೊಂದರೆ ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಸಚಿವರ ಜತೆ ಚರ್ಚಿಸಿ ಕೂಡಲೇ ಪರಿಹರಿಸುವು ದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ತಾ.ವೈದ್ಯಾಧಿಕಾರಿ ಡಾ. ನವೀದ್ ಖಾನ್, ತಜ್ಞ ವೈದ್ಯ ಡಾ. ಶ್ರೀನಿವಾಸ್, ಡಾ.ರವೀಂದ್ರ, ಡಾ.ವಿನಯ್ ಕುಮಾರ್, ಡಾ.ಅನಿಲ್ ಕುಮಾರ್, ಡಾ.ಸುರೇಶ್, ಡಾ.ಗಂಗೂಬಾಯಿ ಸಹಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.