ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಪುರಾಣ ಪ್ರಸಿದ್ಧ ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನ

Share Below Link

ವಕ್ರತುಂಡ ಮಹಾಕಾಯ|
ಕೋಟಿ ಸೂರ್ಯ ಸಮಪ್ರಭ|
ನಿರ್ವಿಘ್ನಂ ಕುರುಮೇ ದೇವ|
ಸರ್ವ ಕಾರ್ಯೇಶು ಸರ್ವದಾ||
ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನದ ಇತಿಹಾಸ :
ಹಿಂದೆ ಲಿಂಗನಮಕ್ಕಿ ಜಲಾಶಯ ಆಗುವುದಕ್ಕೂ ಮುಂಚೆ ಕಂಚಿಕೈ ಎಂಬ ಊರಿನ ಸುತ್ತ ಮುತ್ತ ಬಹಳ ಊರು ಇದ್ದು, ಕಂಚಿಕೈ ದಾರಿಹೋಕರಿಗೆ ಹಾಗೂ ಮೊದಲು ಇದ್ದ ಬಹುಷಃ ಎಣ್ಣೆ ಹೊಳೆ ಎಂಬ ನದಿಯ ಮೇಲೆ ಜಲಸಾರಿಗೆ ಅಂದರೆ ದೋಣಿ ಪಯಣ ಇತ್ತು. ಈ ಪಯಣ ಕಂಚಿಕೈ ಹತ್ತಿರದ ಮೆಣಸಗಾರು ಊರಿನಿಂದ ಆರಂಭವಾಗಿ ತಾಳಗುಪ್ಪಕ್ಕೆ ಹೋಗಲು ಬಹಳ ಸಮೀಪದ ದಾರಿಯಾಗಿತ್ತು. ಊರಿನ ಸುತ್ತ ಮುತ್ತ ಎಲ್ಲರೂ ಅಡಿಕೆ, ಬಾಳೆ ತೋಟ ಹಾಗೂ ಗzಗಳನ್ನು ಹೊಂದಿ ವ್ಯವಸಾಯ ಮಾಡುತ್ತಿದ್ದರು.
ವ್ಯವಸಾಯಕ್ಕೆ ಮುಖ್ಯವಾಗಿ ಗೊಬ್ಬರಕ್ಕಾಗಿಯಾದರೂ ಹಸುಗಳನ್ನು ಸಾಕಲೇಬೇಕಾದ ಅನಿವಾರ್ಯತೆ ಪ್ರತಿಯೊಬ್ಬರಿಗೂ ಇತ್ತು. ಬಹಳ ಹಿಂದಿನವರೆಗೂ ಈ ಹಸುಗಳನ್ನು ಕಾಯ್ದುಕೊಂಡು ಅವು ಕಾಡಿನೊಳಗೆ ಉಳಿದು ಕಾಡು ಮೃಗಗಳ ಪಾಲಾಗದಂತೆ ಕಾಪಾಡಲು ಪ್ರತೀ ಊರಿನವರು ಗೋವುಗಳನ್ನು ಕಾಯುವುದಕ್ಕಾಗಿ ಗೋವಳನನ್ನು ನೇಮಿಸುವುದು ಒಂದು ಪದ್ಧತಿ.
ಕಂಚಿಕೈ ದೇವಸ್ಥಾನ ಇರುವ ಜಗ ಹುಲ್ಲುಗಾವಲಿನ ಗುಡ್ಡದ ಬುಡ. ಈ ಹುಲ್ಲುಗಾವಲಿನಲ್ಲಿ ಗೋವಳನು ಪ್ರತೀದಿನ ಹಸುಗಳನ್ನು ಮೇಯಿಸುತ್ತ ಹತ್ತಿರ ಇರುವ ಹೊಳೆಯಲ್ಲಿ ಹಸುಗಳಿಗೆ ನೀರು ಕುಡಿಸಿ ಸಂಜೆ ಸಮಯದಲ್ಲಿ ಹಸುಗಳನ್ನು ಮನೆಗೆ ಕರೆತರುತ್ತಿದ್ದ. ಹೀಗೆ ಪ್ರತೀ ದಿನವೂ ಹುಲ್ಲುಗಾವಲಿನಲ್ಲಿ ಹಸು ಮೇಯಿಸುತ್ತಿರುವಾಗ ಒಂದು ಹಸು ಪ್ರತೀದಿನ ಮರದ ಹಿಂದೆ ನಿಂತು ಬಹಳ ಸಮಯದ ನಂತರ ಅಲ್ಲಿಂದ ಬರುತ್ತಿತ್ತು.
ಪ್ರತೀದಿನವೂ ಆ ಹಸು ಅಲ್ಲಿಗೆ ಹೋಗಿ ಬರುತ್ತಿದ್ದುದನ್ನು ನೋಡಿ ಗೋವಳನಿಗೆ ಅನುಮಾನ ಬಂದು ಅಲ್ಲಿ ಏನಾದರೂ ನೀರಡಿಕೆ ತೀರಿಸಿಕೊಳ್ಳಲು ನೀರಿನ ಕೆರೆ ಇರಬಹುದೇ ಎಂಬ ಸಂದೇಹದೊಡನೆ ಆ ಹಸುವನ್ನು ಹಿಂಬಾಲಿಸಿದ. ಆ ಹಸು ಅಲ್ಲಿ ಏನನ್ನೂ ಹುಡುಕದೇ ಅಲ್ಲಿರುವ ಶಿಲೆಯ ಮೇಲೆ ಹಾಲು ಸುರಿಸುವುದನ್ನು ಕಂಡ. ಇದು ಆಶ್ಚರ್ಯ ಎನಿಸಿದರೂ ಬಹುಶಃ ಹಾಲು ತಾನಾಗಿಯೇ ಬಿದ್ದಿರಬಹುದು ಎಂಬ ಅನುಮಾನದೊಡನೆ ನೋಡಿಯೂ ನೋಡದಂತೆ ಬಂದ. ಆದರೆ ಹಸು ಮಾತ್ರ ದಿನವೂ ಹಾಲು ಸುರಿಸಿ ಬರುತ್ತಲೇ ಇತ್ತು.
ನಾಲ್ಕಾರು ದಿನ ಈ ಘಟನೆಯನ್ನು ನೋಡಿದ ಗೋವಳ ಇದನ್ನು ಊರಿನವರಿಗೆ ತಿಳಿಸಿ, ಜನರನ್ನು ಕರೆತಂದು ನೋಡಿದಾಗ ಅಲ್ಲಿ ನೆರೆದವರಿಗೆ ಆ ಶಿಲೆ ಗಣೇಶನ ಮುಖದ ಆಕಾರ ಕಂಡಿತಲ್ಲದೇ, ಇದು ಲಿಂಗ ರೂಪ ಗಣಪ ಎಂಬ ಉದ್ಗಾರ ಹೊರಟು, ಆ ಜಗವನ್ನು ಸ್ವಚ್ಛ ಗೊಳಿಸಿ, ಸಣ್ದದಾದ ದೇವಸ್ಥಾನ ಕಟ್ಟಿ, ಪ್ರಾಣಪ್ರತಿಷ್ಠೆ ಮಾಡಿದರು.
ಕಂಚಿಕೈ ಊರಿನಲ್ಲಿ ಇರುವ ಈ ದೇವಸ್ಥಾನಕ್ಕೆ ಮಾಗಾರು ಎಂಬ ಹೆಸರು ಸೇರಿಕೊಂಡಿರುವುದಕ್ಕೆ ಸ್ಥಳಿಯರು ಎರಡು ಕಾರಣ ಊಹಿಸುತ್ತಾರೆ. ಮಾಗಾರು ಎಂದರೆ ಮಾತೆಯ ಜೊತೆಗೂಡಿದವನು. ಇನ್ನೊಂದು ಕಥೆಯ ಪ್ರಕಾರ ಪಕ್ಕದ ಗ್ರಾಮವಾದ ಹಾಂಸೆಯ ಬಳಿ ಮಾಗಾರು ಎಂಬ ಊರು ಇತ್ತು. ಸದರೀ ಸ್ಥಳದಲ್ಲಿ ಋಷಿ ಮುನಿಗಳಿಗೆ ಸೇರಿದ ಶ್ರೀ ಮಾಗಾರು ಮಠ ಇತ್ತು. ಸದರಿ ಮಠದಲ್ಲಿ ಕೆಲವು ಶತಮಾನಗಳ ಹಿಂದೆ ಉದ್ಭವ ಗಣಪತಿ ದಕ್ಷಿಣಾಭಿಮುಖಿ ದೇವಾಲಯವಿತ್ತು. ಪ್ರಾಕೃತಿಕ ಮತ್ತು ಇನ್ನಿತರೆ ಕಾರಣಗಳಿಂದ ಅದು ಭಗ್ನ ಆಗುವ ವೇಳೆಗೆ ಪಕ್ಕದ ಕಂಚಿಕೈಯಲ್ಲಿ ಗಣಪತಿ ದೇವರು ಉದ್ಭವ ಆಗುವುದಕ್ಕೂ ಕಾಕತಾಳಿಯವಾಗಿ ಹೊಂದಾಣಿಕೆ ಆದ್ದರಿಂದ ಹೊಸದಾಗಿ ಉದ್ಭವ ಆಗಿರುವ ಸ್ಥಳವೇ ಮಾಗಾರು ಶ್ರೀ ಮಹಾಗಣಪತಿ ಎಂದು ಕರೆಯಲಾ ಗಿದೆ ಎಂಬುದು ತಿಳಿದವರ ಮಾತು.
ದೇವಾಲಯದಲ್ಲಿನ ದೇವತೆಗಳು :
ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿರುವ ಶ್ರೀರಾಮಚಂದ್ರ ಸಹಿತ ಶ್ರೀ ಸೀತಾ, ಲಕ್ಷ್ಮಣ, ಹನುಮ ದೇವರ ವಿಗ್ರಹಗಳು ಮಾಗಾರು ಮಠದಿಂದ ಬಂದಿವೆ ಎನ್ನಲಾಗಿದೆ.
ಶ್ರೀರಾಮದೇವರಿಗೆ ನಿತ್ಯಾರ್ಚನೆ ಮತ್ತು ವಾರ್ಷಿಕ ೯ ದಿನಗಳ ಶ್ರಿ ರಾಮೋತ್ಸವ ಹಾಗೂ ವಾರ್ಷಿಕ ಅನ್ನಸಂತರ್ಪಣೆ ನಡೆಯುತ್ತದೆ.
ದೇವಸ್ಥಾನದ ಪ್ರಮುಖ ಶಕ್ತಿ ದೇವತೆ ಶ್ರೀ ರಾಜರಾಜೇಶ್ವರಿ ಅಮ್ಮನವರು. ಶ್ರೀದೇವಿ ಮೂಲತಃ ಒಂದು ಕುಟುಂಬದ ಆರಾಧ್ಯ ದೇವಿಯಾಗಿದ್ದು, ಕಾಲಾನಂತರ ಶ್ರೀ ಸನ್ನಿಧಾನ ಸೇರಿ ಶಕ್ತಿ ದೇವತೆಯಾಗಿ ಕಂಗೊಳಿಸುತ್ತಿzಳೆ. ಶ್ರೀದೇವಿಗೂ ಸಹ ನಿತ್ಯಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.
ದೇವಸ್ಥಾನಕ್ಕೆ ಹೋಗುವ ಮಾರ್ಗ :
ಶಿವಮೊಗ್ಗ ಜಿ, ಸಾಗರದಿಂದ ಸುಮಾರು ೪೧ ಕಿ.ಮೀ. ದೂರದಲ್ಲಿದೆ. ಬಾರಂಗಿ ಹೋಬಳಿಯ ಕಂಚಿಕೈ ಎಂಬ ಗ್ರಾಮದಲ್ಲಿ ಶರಾವತಿ ನದಿಯ ದಂಡೆಯ ಮೇಲೆ ಈ ದೇವಸ್ಥಾನವಿದೆ. ಸಾಗರದಿಂದ ಕಾರ್ಗಲ್ ಪಟ್ಟಣದ ನಂತರ, ಕಾರ್ಗಲ್‌ನಿಂದ ಭಟ್ಕಳಕ್ಕೆ ಹೋಗುವ ರಸ್ತೆಯಲ್ಲಿ ಅರಳಗೋಡು ಎಂಬ ಊರಿನಲ್ಲಿ ಎಡಕ್ಕೆ ತಿರುಗಿ ಕಂಚಿಕೈ ಮಹಾದ್ವಾರದ ಮೂಲಕ ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನವನ್ನು ತಲುಪಬಹುದು. ಜೋಗ ಜಲಪಾತದಿಂದ ಸುಮಾರು ೨೧ ಕಿ.ಮೀ. ದೂರದಲ್ಲಿದೆ.
ದೇವಸ್ಥಾನದ ವಿಳಾಸ :
ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನ, ಅರಳಗೋಡು-ಕಂಚಿಕೈ ರಸ್ತೆ, ಮಾಗಾರು – ೫೭೭೪೨೧. ಸಾಗರ ತಾಲ್ಲೂಕು, ಶಿವಮೊಗ್ಗ ಜಿ.

  • ಮುರುಳೀಧರ್ ಹೆಚ್.ಸಿ.
    ವರದಿಗಾರರು, ಕ್ಷೇತ್ರದರ್ಶನ ಅಂಕಣಕಾರರು,
    ಹೊಸ ನಾವಿಕ ದಿನಪತ್ರಿಕೆ, ಶಿವಮೊಗ್ಗ.