ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸುಂದರ ಅವಳಿ ನಗರಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್…

Share Below Link

ಶಿವಮೊಗ್ಗ: ದೂರ ದೃಷ್ಟಿಯೊಂದಿಗೆ ಶಿವಮೊಗ್ಗ- ಭದ್ರಾವತಿ ಅವಳಿ ನಗರಗಳ ಸರ್ವಾಂಗೀಣ ವಿಕಾಸಕ್ಕೆ ಮಾಸ್ಟರ್ ಪ್ಲಾನ್ ( ನೀಲನಕ್ಷೆ ) ತಯಾರಿಸಲಾಗಿದೆ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಅಮೃತ್ ಯೋಜನೆಯಡಿ ೨೦೩೧ ರವರೆಗೆ ಅಭಿವೃದ್ಧಿಯ ರೇಖೆ ನಿಗಧಿಪಡಿಸಲಾಗಿದೆ. ಆದರೆ, ಈ ಪ್ರಾಧಿಕಾರವು ೨೦೪೧ರ ರೇಖೆಯನ್ನು ನಿಗಧಿಪಡಿಸಿ ಕೊಂಡು ಇಂದಿನ ಜನಸಂಖ್ಯೆಗೆ ಹೆಚ್ಚುವರಿಯಾಗಿ ೧೫ಲಕ್ಷ ಜನಸಂಖ್ಯೆ ಯನ್ನು ಹೆಚ್ಚುವರಿಯಾಗಿ ಪರಿಗಣಿಸಿ, ನಗರಾಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದರು.
ವಿಶೇಷವಾಗಿ ಈ ಕ್ರಿಯಾ ಯೋಜನೆಯಲ್ಲಿ ನಗರದಲ್ಲಿ ವಿಶಾಲವಾದ ರಸ್ತೆಗಳ ನಿರ್ಮಾಣ, ಉದ್ಯಾನವನಗಳು, ವಿದ್ಯುತ್ ಸಂಪರ್ಕ, ಶುದ್ಧಕುಡಿಯುವ ನೀರು, ಚರಂಡಿ, ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಪ್ರವಾಸೋದ್ಯಮ, ಉದ್ಯೋಗ ಸೃಜನೆ, ವರ್ತುಲ ರಸ್ತೆಗಳ ನಿರ್ಮಾಣ ಮುಂತಾದ ಅನೇಕ ಮಹತ್ವದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
೨೦೧೨ರಲ್ಲಿ ಪ್ರಸ್ತಾಪಿತ ನಗರದ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯ ದಲ್ಲಿ ಉಳಿದ ರಸ್ತೆಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಶಿವಮೊಗ್ಗ, ಭದ್ರಾವತಿ, ಸೋಗಾನೆ, ಹೊಳೆಹನಸವಾಡಿ ಸೇರಿದಂತೆ ಶಿವಮೊಗ್ಗ ನಗರದ ನಾಲ್ಕು ದಿಕ್ಕುಗಳಲ್ಲಿಯೂ ನಗರಾಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದ ಅವರು, ಊರಗಡೂರು ಪ್ರದೇಶದಲ್ಲಿ ಉದ್ದೇಶಿತ ಬಡಾವಣೆ ಯಲ್ಲಿನ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ೭೦೦೦- ೮೦೦೦ ಅರ್ಜಿಗಳು ಬಂದಿದ್ದು, ಅವುಗಳನ್ನು ಭೂಮಾಲೀಕರಿಗೆ, ಪರಿಶಿಷ್ಟ ಜತಿ- ಪಂಗಡದವರಿಗೆ, ಹಿಂದುಳಿದವರ್ಗ ದವರಿಗೆ, ನೌಕರರಿಗೆ, ಸಾಮಾನ್ಯ ವರ್ಗದವರಿಗೆ, ವಿಕಲಾಂಗರಿಗೆ, ಕಲೆ, ವಿಜನ, ಕ್ರೀಡೆ, ಮಾಧ್ಯಮ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಕಾಯ್ದಿರಿಸಲಾಗಿದೆ ಎಂದರು.
ಮಿಂಚಿನ ವೇಗದಲ್ಲಿ ಬೆಳೆಯುತ್ತಿ ರುವ ನಗರದಲ್ಲಿ ಜನಸಾಮಾನ್ಯರು ನಿವೇಶನಗಳನ್ನು ಖರೀದಿಸಿ, ತಮ್ಮ ಕನಸಿನ ಮನೆ ನಿರ್ಮಿಸಿಕೊಳ್ಳುವುದು ಕಷ್ಟಸಾಧ್ಯವೆಂದರಿತು ಪ್ರಾಧಿಕಾರದ ವತಿಯಿಂದಲೇ ಗುಂಪುಮನೆ ಸಮುಚ್ಚಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಊರಗಡೂರು ಪ್ರದೇಶದಲ್ಲಿ ನಾಲ್ಕು ಎಕರೆ ಭೂಮಿಯನ್ನು ಸೋಮಿನ ಕೊಪ್ಪ- ಜೆ.ಹೆಚ್.ಪಟೇಲ್ ಬಡಾ ವಣೆಗಳಲ್ಲಿ ೧.೧೦ಎಕರೆ ಜಮೀನನ್ನು ಕಾಯ್ದಿರಿಸಿದ್ದು, ಗೋಪಾಳ ಬಡಾವಣೆ ಹಾಗೂ ೧೦೦ಅಡಿ ರಸ್ತೆಯಲ್ಲಿ ಪ್ರಾಧಿಕಾರದಿಂದಲೇ ವಾಣಿಜ್ಯ ಮಳಿಗೆ ಮಾಲ್‌ಗಳನ್ನು ನಿರ್ಮಿಸಲಾಗುವುದು ಎಂದರಲ್ಲದೇ, ಪ್ರಾಧಿಕಾರದ ವತಿಯಿಂದ ಇನ್ನಷ್ಟು ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ೧೦೦ಎಕರೆ ಭೂಮಿಯನ್ನು ಪ್ರಾಧಿಕಾರಕ್ಕೆ ಒದಗಿಸಿ ಕೊಡುವಂತೆ ಮನವಿ ಮಾಡಿಕೊಳ ಲಾಗಿದೆ. ಅದಕ್ಕಾಗಿ ನಗರದ ಹೊರವಲಯ ಸೋಗಾನೆ ಸರ್ವೇ ನಂ.೧೫೬ರಲ್ಲಿ ೧೦೦ ಎಕರೆ ಜಮೀನನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಗೋಪಿಶೆಟ್ಟಿಕೊಪ್ಪದಲ್ಲಿ ೫೦:೫೦ ಒಡಂಬಡಿಕೆಯನ್ವಯ ಬಡಾವಣೆ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ಮುಂದಾಗಿದ್ದಾರೆ. ಅವರಲ್ಲೂ ಅನೇಕ ರೈತರೊಂದಿಗೆ ಒಂದೆರೆಡು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಅಂತಿಮ ಸುತ್ತಿನ ಮಾತುಕತೆ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ನಿಧಿಗೆ ಯಲ್ಲಿ ೩ಎಕರೆ ಕಾಯ್ದಿರಿಸಿದ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಶೀಘ್ರದಲ್ಲಿ ಕ್ರಮ ವಹಿಲಾಗುತ್ತಿದೆ ಎಂದರು.
ಪ್ರಾಧಿಕಾರದ ವ್ಯಾಪ್ತಿಗೊಳಪಡುವ ೧೫ಕೆರೆಗಳ ಅಭಿವೃದ್ಧಿಗೆ ೩೫ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದ ಅವರು, ಅಟಲ್ ಬಿಹಾರಿ ವಾಜಪೇಯಿ ಲೇಔಟ್‌ನಲ್ಲಿನ ಅಕ್ರಮ ನಿವೇಶನ ಹಂಚಿಕೆಯನ್ನು ಈಗಾಗಲೇ ರದ್ದು ಗೊಳಿಸಲಾಗಿದೆ. ಉಳಿದ ನಿವೇಶನಗಳ ಹಂಚಿಕೆಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಪ್ರಾಧಿಕಾರದ ಆಯುಕ್ತ ವಿಶ್ವನಾಥ ಮುದ್ದಜ್ಜಿ, ನಾಮ ನಿರ್ದೇಶಿತ ಸದಸ್ಯರಾದ ಹೆಚ್.ರವಿಕುಮಾರ್, ಮಹ್ಮದ್ ಯೂಸೂಫ್, ರೇಣುಕಮ್ಮ ಸೇರಿದಂತೆ ಪ್ರಾಧಿಕಾರದ ಅಧಿಕಾರಿ -ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *