ತಾಜಾ ಸುದ್ದಿಲೇಖನಗಳು

ಬುದ್ಧಿವಂತರ ಬಾಳು…..

Share Below Link

ಈ ಸೃಷ್ಟಿಯ ಮಡಿಲಲ್ಲಿ eನವು ಜೀವ ಸಂಕುಲದ ಕಳಶವಿದ್ದಂತೆ. ಗತಕಾಲದಿಂದಲೂ ಶೋಭಾಯಮಾನವಾಗಿ ಪ್ರಕಾಶಿಸುತ್ತಿರುವುದಾಗಿದೆ.
ಒಂದು ಗಾದೆ ಮಾತಿನಂತೆ ತಿಪ್ಪೆ ಹೋಗಿ ಉಪ್ಪರಿಗೆ ಯಾಗಬಹುದು, ಉಪ್ಪರಿಗೆ ಹೋಗಿ ತಿಪ್ಪೆಯಾಗಬಹುದು. ಇದರ ನಿಜರ್ಥವಿಷ್ಟೇ ಈ ಜೀವನ ಚಕ್ರದಲ್ಲಿ ಶ್ರೀಮಂತಿಕೆ, ಬಡತನವೆಂಬುದು ಅವರವರ ಮತಿ ಯೋಜನೆಗಳಿಗೆ ಬಿಟ್ಟದ್ದು. ಒಳ್ಳೆಯ ಹಾಗೂ ಸಮಯಪ್ರಜ್ಞೆ ಚತುರತೆಯು ಒಬ್ಬ ಬಡವನ ಬಾಳನ್ನು ಅತ್ಯಂತ ಶ್ರೀಮಂತಿಕೆಯಿಂದ ಇರುವಂತೆ ಮಾಡಬಹುದು. ಅದೇ ಮೂರ್ಖತನದ ಬುದ್ಧಿಯು ಶ್ರೀಮಂತ ಬಾಳನ್ನು ಕಷ್ಟ ಸಂಕೋಲೆಗೆ ನೂಕಬಹುದಾಗಿದೆ. ಆದ್ದರಿಂದ ಮೂರು ದಿನದ ಈ ಬಾಳಿನಲ್ಲಿ ಸಮಯೋಚಿತ ಹಾಗೂ ಚತುರತೆಯಿಂದ ಬದುಕ ಪಯಣವನ್ನು ಸಂಪನ್ನಗೊಳಿಸಬೇಕಾಗಿದೆ.
ಹೀಗೆ ಒಂದೂರಲ್ಲಿ ರಾಮಪ್ಪನೆಂಬ ಬಡವ ಕೃಷಿ ಕಾರ್ಯವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಒಂದೊಮ್ಮೆ ಅವನ ಜೋಡಿ ಎತ್ತುಗಳಲ್ಲಿ ಒಂದು ಎತ್ತಿಗೆ ತೀವ್ರತರ ಕಾಯಿಲೆ ಉಂಟಾಯಿತು. ಯಾವ ನವ, ನಾಟಿ ಔಷಧಗಳು ಆ ಕಾಯಿಲೆಯ ಮೇಲೆ ಪರಿಣಾಮ ಬೀರಲಿಲ್ಲ. ಚಿಂತಾಕ್ರಾಂತನಾಗಿದ್ದ ರಾಮಪ್ಪ ಊರಿನ ಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಹೋಗಿ ಹರಕೆಯ ಮೊರೆ ಹೋದ. ದೇವರೇ..! ಈ ಎತ್ತಿನ ಕಾಯಿಲೆಯನ್ನು ಗುಣಪಡಿಸು ನಂತರ ಇದನ್ನು ಮಾರಿ ಬೇರೆ ಎತ್ತನ್ನು ಕೊಂಡುಕೊಳ್ಳುವೆ ಅಲ್ಲದೇ ಮಾರಿ ಬಂದ ಹಣದ ಅರ್ಧ ಭಾಗವನ್ನು ನಿನ್ನ ಸನ್ನಿಧಿಗೆ ಒಪ್ಪಿಸುವೆ ಎಂದು ಅರಿಕೆ ಇಟ್ಟನು. ಅದೃಷ್ಟವೋ ಅಥವಾ ದೇವರ ಕೃಪೆಯು ತಿಳಿಯಲಿಲ್ಲ, ಎತ್ತು ದಿನದಿಂದ ದಿನಕ್ಕೆ ಚೇತರಿಸಿಕೊಂಡು ಸ್ವಾಸ್ಥ್ಯತೆಯನ್ನು ಹೊಂದಿತು. ಅವಾಗಲೇ ರಾಮಪ್ಪ ಇದನ್ನು ಬೇಗ ಮಾರಿ ಬೇರೆಯದ್ದನ್ನು ಕೊಳ್ಳಲು ಊರಿನ ಸಂತೆಗೆ ಧಾವಿಸಿದ ಎತ್ತಿಗೇನೋ ಒಳ್ಳೆಯ ಬೆಲೆಯಾದ ೧೫೦೦೦ ರೂ. ಬೆಲೆ ಬಂದಿತು. ಆದರೆ ಅವನ ಯೋಚನೆಯೇ ಬೇರೆಯಾಗಿತ್ತು.
ಏಕೆಂದರೆ ಮಾರಿ ಬಂದಂತಹ ಬೆಲೆಯ ಹಣದಲ್ಲಿ ಅರ್ಧ ದೇವರಿಗೆ ಕೊಡಬೇಕೆಲ್ಲ ಎಂದು ಚಿಂತೆಯಲ್ಲಿ ಮುಳುಗಿದ. ವ್ಯಾಪಾರಿಗಳು ಇನ್ನೂ ಹೆಚ್ಚಿನ ಬೆಲೆ ಕೊಟ್ಟು ಎತ್ತನ್ನು ಕೊಳ್ಳಲು ಮುಂದಾಗಿದ್ದರು. ಆದರೆ ರಾಮಪ್ಪ ಏನು ಮಾಡಲಾಗದೆ ಕೈಕಟ್ಟಿಕೊಂಡು ಕೂತಿದ್ದ, ಹೀಗೆ ಕೂತಿರುವ ವ್ಯಕ್ತಿಯನ್ನು ಅವನ ಸ್ನೇಹಿತ ಹಾಗೂ ಚಾಲಾಕಿಯಾದ ರಂಗಣ್ಣನು ನೋಡಿ ಅವನ ಬಳಿ ಬಂದು ಏನಯ್ಯ ರಾಮಪ್ಪ ಆವಾಗಿಂದ ಮಾರಾಟಕ್ಕೆ ತಂದಿರುವ ಎತ್ತನ್ನು ಮಾರದೆ ಏಕೆ ಕೈ ಹಿಸುಕಿ ಕೊಳ್ಳುತ್ತಾ ಇಟ್ಕೊಂಡು ಕುಂತಿರುವೆಯಲ್ಲ ಎಂದು ಕೇಳಿದ! ಆವಾಗ ರಾಮಪ್ಪ ಅವನ ಪರಿಸ್ಥಿತಿ ಎಲ್ಲವನ್ನು ಅರುಹಿದ. ನಂತರ ರಂಗಣ್ಣ ಇದೇನು ಮಹಾ ಕಷ್ಟ , ಏಕೆ ಇಷ್ಟು ಯೋಚನೆಯಲ್ಲಿ ಮುಳುಗಿರುವೆ, ನನಗೆ ಒಂದು ಸಾವಿರ ರೂಪಾಯಿ ಕೊಡುವುದಾದರೆ ನಿನ್ನ ಕಷ್ಟಕ್ಕೆ ಪರಿಹಾರ ನೀಡುವೆ ಎಂದನು.
ತಕ್ಷಣವೇ ರಾಮಪ್ಪ ಅವನ ಕೈಗೆ ಒಂದು ಸಾವಿರ ರೂಪಾಯಿ ಕೊಟ್ಟನು. ಕೂಡಲೇ ರಂಗಣ್ಣ ಒಂದು ಮುzದ ಕುರಿಮರಿಯನ್ನು ತೆಗೆದುಕೊಂಡು ಬಂದ ಎತ್ತು ಹಾಗೂ ಕುರಿಮರಿ ಎರಡನ್ನು ಸೇರಿ ಮಾರಾಟಕ್ಕೆ ಇಟ್ಟನು. ಹಾಗೆಯೇ ಒಂದು ಶರತ್ತನ್ನು ಕೂಡ ಹಾಕಿದನು. ಎತ್ತು ಹಾಗೂ ಕುರಿಮರಿಯನ್ನು ಒಟ್ಟಿಗೆ ಕೊಂಡುಕೊಳ್ಳಬೇಕೆಂದು ಹೇಳಿದ. ಕುರಿಮರಿಯ ಬೆಲೆ ೧೬,೦೦೦ ಎತ್ತಿನ ಬೆಲೆ ರೂ.೧೦೦ ಎಂದು ಬೆಲೆ ಕಟ್ಟಿದ. ಇದನ್ನು ತಿಳಿದ ವ್ಯಾಪಾರಿಗಳು ನಗುತ್ತಲೇ ಇವನಿಗೆ ಮಾರಾಟದ ಗಂಧವೇ ಗೊತ್ತಿಲ್ಲ ಯಾವುದಕ್ಕೆ ಹೆಚ್ಚು ಬೆಲೆ ನಿಗದಿ ಮಾಡಬೇಕು ಯಾವುದಕ್ಕೆ ಕಡಿಮೆ ಬೆಲೆ ನಿಗದಿಸಬೇಕು ಎಂದು ತಿಳಿಯದೆ ಮಾರಾಟಕ್ಕೆ ಬಂದಿರುವನಲ್ಲ ಎಂದು ನಗುತ್ತಲೇ ಅವೆರಡೂ ಪ್ರಾಣಿಗಳನ್ನು ೧೬,೦೦೦ ಒಂದು ನೂರು ರೂಪಾಯಿಗೆ ಕೊಂಡುಕೊಂಡರು. ಮಾರಿ ಬಂದ ಎ ಹಣವನ್ನು ನೇರವಾಗಿ ರಂಗಣ್ಣ ರಾಮಪ್ಪನ ಕೈಗೆ ಇಟ್ಟನು. ಇಷ್ಟು ದುಡ್ಡು ನೋಡಿ ಅವನ ಮುಖದಲ್ಲಿ ಕಿರುನಗೆ ಮೂಡಿತು. ಹಾಗೆಯೇ ತನ್ನ ಹರಿಕೆಯ ನೆನಪನ್ನು ಮಾಡಿದ ಆಗ ರಂಗಪ್ಪ ನೀನು ದೇವರಿಗೆ ಕೇವಲ ರೂ.೫೦ ಮಾತ್ರ ಕೊಡಬೇಕು ಎಂದನು. ರಾಮಪ್ಪನಿಗೆ ಏನು ತಿಳಿಯದಾಯಿತು.
ಆಗ ರಂಗಣ್ಣ ಕುರಿಯ ಬೆಲೆ ೧೬೦೦೦ ಎತ್ತಿನ ಬೆಲೆ ರೂ.೧೦೦ ಎಂದನು. ಹಾಗಾದರೆ ನೀನು ಈಗ ಹೇಳು ದೇವರಿಗೆ ಎತ್ತಿನ ಬೆಲೆಯಲ್ಲಿ ಹರಕೆಯ ರೂಪವಾಗಿ ಎಷ್ಟು ಕೊಡಬೇಕು ಎಂದನು. ನಗುತ್ತಲೇ ರಂಗಣ್ಣ ರೂ.೫೦ಯನ್ನು ಆಂಜನೇಯ ದೇವರಿಗೆ ಅರ್ಪಿಸಿ ಬಂದನು . ಜೊತೆಗೆ ರಂಗಣ್ಣನ ಸಾವಿರ ರೂಪಾಯಿಯನ್ನು ಅವನ ಕೈಗಿಟ್ಟು ಸಂತೋಷದಿಂದ ಮನೆ ಕಡೆ ನಡೆದನು.
ಇಲ್ಲಿ ನಾವು ತಿಳಿಯಬಹುದಾಗಿತ್ತು ಇಷ್ಟೆ , ಬದುಕಲ್ಲಿ ಜಣ್ಮೆ ಇರಬೇಕು, ರಾಮಪ್ಪ -ರಂಗಣ್ಣ ಇಬ್ಬರು ಸುವಿಚಾರಿಗಳೇ! ಆದರೆ ಯೋಚನಾ ಶೈಲಿ ಬೇರೆಯಾಗಿತ್ತು. ರಾಮಪ್ಪನ ಕಷ್ಟವನ್ನು ಪರಿಹರಿಸಿಕೊಳ್ಳಲು ಯೋಚನೆಯನ್ನು ಮಾತ್ರ ಮಾಡಿದ, ಆದರೆ ರಂಗಣ್ಣ ಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಫಲನಾದ. ಹಾಗಾಗಿ ನಾವು ಎಲ್ಲರಲ್ಲಿ ಒಬ್ಬನಾಗಿ ಬದುಕುವುದಲ್ಲ, ಎಲ್ಲರಿಗಿಂತ ಶ್ರೇಷ್ಠನಾಗಿ ಬುದ್ದಿವಂತಿಕೆಯಿಂದ ಬದುಕುವುದು ಒಳಿತೆಂದು ತಿಳಿಯಬಹುದಾಗಿದೆ.


ಲೇಖನ: ಅಶ್ವಿನಿ ಅಂಗಡಿ
ಶಿಕ್ಷಕಿ ಹಾಗೂ ಸಾಹಿತಿ, ಬದಾಮಿ.