ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಳಿವು-ಉಳಿವು-ಸವಾಲು…
![](https://i0.wp.com/hosanavika.com/wp-content/uploads/2023/06/1-8.gif?resize=86%2C117&ssl=1)
ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿದ್ದ ಭದ್ರಾವತಿಯ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಳಿವು-ಉಳಿವು ಮತ್ತು ಸವಾಲುಗಳ ಕುರಿತು ಜಿಲ್ಲಾ ಕೈಗಾರಿಕಾ ಸಂಘದ ಗೌರವಾಧ್ಯಕ್ಷರೂ ಹಾಗೂ ರಾಜ್ಯ ಕೈಗಾರಿಕಾ ಸಂಘದ ಮಾಜಿ ನಿರ್ದೇಶಕರೂ ಆಗಿರುವ ಕೆ.ಎಸ್. ಅನಂತರಾಮ( Mobile: 8277007822, email: anantharam.ks13@gmail.com) ಅವರು ಬರೆದ ಲೇಖನ ಹೊಸನಾವಿಕ ಓದುಗರಿಗಾಗಿ…
ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ನವರು ಭದ್ರಾವತಿಯಲ್ಲಿ ಪ್ರಾರಂಭಿಸಿದ ವಿಶ್ವವಿಖ್ಯಾತ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇಂದು ಅಳಿವಿನ ಹಂತದಲ್ಲಿದೆ. ಈಗಾಗಲೇ ಸಕ್ಕರೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ ಮುಚ್ಚಿ ಪೇಪರ್ ಕರ್ಖಾನೆ (ಎಂಪಿಎಂ) ಮುಚ್ಚುವ ಕೊನೆ ಹಂತದಲ್ಲಿದೆ. ಈ ದುರಂತಕ್ಕೆ ಏನು ಕಾರಣ? ಯಾರು ಕಾರಣ? ಎಂಬ ತರ್ಕಕ್ಕೆ ಹೋಗು ವುದರಲ್ಲಿ ಉಪಯೋಗವೇನೂ ಇಲ್ಲ.
ಭದ್ರಾವತಿ ತಾಲ್ಲೂಕು ಮತ್ತು ಸುತ್ತಮುತ್ತಲಿನ ತಾಲ್ಲೂಕುಗಳು ಅಡಿಕೆ ಮತ್ತು ಕಬ್ಬು ಬೆಳೆಗೆ ಪ್ರಸಿದ್ಧವಾಗಿದೆ. ಭದ್ರಾ ನದಿಯ ಮಡಿಲಲ್ಲಿ ಸಾಗಿ ಬಂದಿರುವ ಈ ತಾಲ್ಲೂಕಿನ ನಾಗರೀಕರು ಅತ್ಯಂತ ಶ್ರಮ ಜೀವಿಗಳು, ಸರಳ ಜೀವಿಗಳು ಮತ್ತು ಸಜ್ಜನರು. ಅವರುಗಳು ಬೆಳೆಯುವ ಅಡಿಕೆ – ಕಬ್ಬು ಬೆಳೆಗಳಿಗೆ ಉತ್ತಮ ಮಾರುಕಟ್ಟೆ , ವೈeನಿಕ ಬೆಲೆ ಮಾಡಿಕೊಡಬೇಕಾಗಿರು ವುದು ಮತ್ತು ಯುವಕ-ಯುವತಿ ಯವರಿಗೆ ಉದ್ಯೋಗ ದೊರಕಿಸಿ ಕೊಡುವುದು ಆಡಳಿತಾರೂಢ ಸರ್ಕಾರಗಳ ಆದ್ಯ ಕರ್ತವ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರತಿಷ್ಠಿತ ಕೈಗಾರಿಕೆಗಳನ್ನು ಪುನಶ್ಚೇತನ ಗೊಳಿಸಲು ಚಿಂತನ -ಮಂಥನ ಮಾಡ ಬೇಕಾಗಿರು ವುದು ಇಂದಿನ ಅಗತ್ಯವೂ ಆಗಿದೆ.
![](https://i0.wp.com/hosanavika.com/wp-content/uploads/2023/06/2-7.gif?resize=800%2C476&ssl=1)
- ಈ ಬೃಹತ್ ಕೈಗಾರಿಕೆಗಳನ್ನು ಅನೇಕ ವರ್ಷಗಳ ಕಾಲ ರಾಜ್ಯ ಸರ್ಕಾರ ಮತ್ತು ಇತ್ತೀಚಿನ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಮಾಡಿಕೊಂಡು ಬಂದರೂ ಯಾವ ಉಪಯೋಗವೂ ಆಗದೆ ಅಂತಿಮವಾಗಿ ಕೈಚೆಲ್ಲಿ ಕುಳಿತಿವೆ.
- ಈ ವಿಚಾರದಲ್ಲಿ ಭದ್ರಾವತಿಯ ನಾಗರೀಕರು, ತಾಲ್ಲೂಕು ಮತ್ತು ಜಿಯ ಜನಪ್ರತಿನಿಧಿಗಳು ಸರಿಯಾಗಿ ಆಲೋಚಿಸುವ ಸಮಯ ಬಂದಿದೆ. ಯಾವುದೇ ಕಾರಣಕ್ಕೂ ರಾಜಕೀಯ ಸಂಘರ್ಷ ಬಾರದಂತೆ ಎಚ್ಚರ ವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶನವಾಗಬೇಕಿದೆ.
- ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಈ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗೆ ಬಂಡವಾಳ ಹಾಕಿ ಪುನಶ್ಚೇತನಗೊಳಿಸಲು ಸಾಧ್ಯವಿಲ್ಲವೆಂಬ ಸತ್ಯದ ಅರಿವು ನಮಗಿರಬೇಕು. ಸರ್ಕಾರಗಳು ಈವರೆಗೆ ಮಾಡಿರುವ ಬಂಡವಾಳ ಹೂಡಿಕೆಯು ಕಾದ-ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಹಾಕಿದಂತೆ ಆಗಿರುವುದಂತೂ ಸತ್ಯ.
- ಈ ಕಾರ್ಖಾನೆಗಳಿಗೆ ಬಹುದೊಡ್ಡ ಮೊತ್ತದ ಹಣವನ್ನು ವಿಧಾನ ಸಭೆ / ಲೋಕಸಭೆಯ ಬಜೆಟ್ನಲ್ಲಿ ಹಂಚಿಕೆ ಮಾಡಲು ಸಾಧ್ಯವಿಲ್ಲ. ಕಾರಣ ಇತರೆ ನೂರಾರು ಸಮಸ್ಯೆಗಳು ಅಗತ್ಯೆತೆಗಳು ಇರುವುದರಿಂದ ಇದಕ್ಕೆ ಬೇಕಾಗಿರುವ ಅಗತ್ಯ ಬಂಡವಾಳವನ್ನು ಸರ್ಕಾರಗಳು ಮಾಡಲು ಖಂಡಿತಾ ಸಾಧ್ಯವಿಲ್ಲ.
- ಹೊಸ-ಹೊಸ ತಂತ್ರeನದ ಆವಿಷ್ಕಾರ, ಹೊಸ-ಹೊಸ ರೀತಿಯ ಚಿಂತನೆಗಳಿಗೆ ಇಂದು ಭಾರತ ಮುಕ್ತವಾಗಿದೆ. ಹಾಗಾಗಿ ಇಲ್ಲಿನ ಪ್ರತಿಷ್ಠಿತ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಅನೇಕ ಮಾರ್ಗೋಪಾಯಗಳಿವೆ.
- ಆಡಳಿತಾರೂಢ ಸರ್ಕಾರಗಳು ದೊಡ್ಡ ಮೊತ್ತದ ಬಂಡವಾಳವನ್ನು ಹೂಡದೆ ಈ ಸಮಸ್ಯೆಗಳನ್ನು ನಿವಾರಿಸಲು ಖಂಡಿತಾ ಸಾಧ್ಯವಿದೆ.
- ವಿಐಎಸ್ಎನ್ನ ಒಟ್ಟು ವಿಸ್ತೀರ್ಣ ೪.೫ ಕಿಲೋಮೀಟರ್(ಟೌನ್ಶಿಪ್ ಸೇರಿ)
- ಎಂಪಿಎಂ ಒಟ್ಟು ವಿಸ್ತೀರ್ಣ ೯೦೦ ಎಕರೆ (ಸುಮಾರು)
- ಒಟ್ಟಾರೆ ಸರಿ ಸುಮಾರು ೨೧೦೦ ಎಕರೆ ಭೂಪ್ರದೇಶ ಇದೆ.
- ೧೯೨೩ರಲ್ಲಿ ವಿಐಎಸ್ಎಲ್ ಪ್ರಾರಂಭವಾಗಿ ಬೆಳೆಯುತ್ತಾ-ಬೆಳೆಯುತ್ತಾ ಜಗತ್ತಿನ ಅತ್ಯಂತ ಗುಣಮಟ್ಟದ ಕಬ್ಬಿಣ-ಉಕ್ಕು ಉತ್ಪಾದಿಸುವ ಘಟಕವಾಯಿತು.
- ಉತ್ಪಾದಕ ಸಾಮರ್ಥ್ಯ ಎಷ್ಟೆಂದರೆ ೨,೧೬,೦೦೦ ಟನ್ ಹಾಟ್ ಮೆಟಲ್, ೯೮,೨೫೦ ಟನ್ ಅಲಾಮ್ಡ್-ಸ್ಪೆಶಲ್ ಸ್ಟೀಲ್, ಪ್ರಮುಖವಾಗಿ ಪಿಗ್ ಐರನ್ ಉತ್ಪಾದಿಸುವ ಘಟಕವಾಗಿತ್ತು.
- ೫೦,೦೦೦ಕ್ಕೂ ಅಧಿಕ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಈ ಕಾರ್ಖಾನೆಯಲ್ಲಿ ಈಗ ಕೇವಲ ೨೬೭ ಜನ ಇzರೆ ಎಂದರೆ ಈ ಕಾರ್ಖಾನೆಯ ದುಃಸ್ಥಿತಿ ಯಾವ ಮಟ್ಟಕ್ಕಿಳಿದಿದೆ ಎಂಬುದನ್ನು ಊಹಿಸಬಹುದು.
- ಎಂಪಿಎಂನಲ್ಲೂ ಸಾವಿರಾರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಕೇವಲ ಅಧಿಕೃತವಾಗಿ ಕೇವಲ ೭೦ಜನ ಇzರೆ. ಅವರಿಗೂ ಸಹ ೮-೧೦ ತಿಂಗಳಿದ ವೇತನ ಕೊಡಲು ಆಗುತ್ತಿಲ್ಲ. ಹಾಗಾಗಿ ಕಂಪನಿಯ ಯಂತ್ರೋಪಕರಣಗಳು ಕಟ್ಟಡಗಳು ತುಕ್ಕು ಹಿಡಿಯುವ ಮೊದಲು ಜಾಗೃತರಾಗಬೇಕು.
ಮಾರ್ಗೋಪಾಯಗಳು:
೧) ವಿಐಎಸ್ಎಲ್ ಮತ್ತು ಎಂಪಿಎಂ ಒಟ್ಟು ಕ್ಷೇತ್ರವನ್ನು ಎಸ್ಇಝೆಡ್ ಕ್ಷೇತ್ರವೆಂದು ಘೋಷಿಸಬೇಕು.
೨) ತಜ್ಞರ ಪರಿಣಿತರ ಸಲಹಾ ಸಮಿತಿಯನ್ನು ತಕ್ಷಣ ಘೋಷಿಸಬೇಕು. ತಾತ್ಕಾಲಿಕ ಸಲಹಾ ಸಮಿತಿಯ ಸಲಹೆಗಳನ್ನು ಆಧರಿಸಿ ಕಾರ್ಯರೂಪಕ್ಕೆ ತರಬೇಕು.
೩) ವಿಶೇಷ ಪ್ರಾಧಿಕಾರವನ್ನು ಘೋಷಿಸಿ, ಅದಕ್ಕೆ ಸಂಪೂರ್ಣ ಜವಾಬ್ದಾರಿಯನ್ನು ನೀಡಬೇಕು.
೪) ಅದಿರು ಹೊಂದಿರುವ ಜಗವನ್ನು ಈ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕು.
೫) ಈ ಪ್ರಾಧಿಕಾರದ ಮೂಲಕ ರಾಜ್ಯ- ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಈ ಕ್ಷೇತ್ರದಲ್ಲಿ ಪ್ರಾವೀಣ್ಯ-ಅನುಭವ ಇರುವ ವ್ಯಕ್ತಿಗಳನ್ನು ಹುಡುಕಿ ಜೋಡಿಸಬೇಕು. ದೊಡ್ಡ ಮಟ್ಟದ ಬಂಡವಾಳ ಹೂಡಲು ಶಕ್ತಿ ಇರುವ ಕೈಗಾರಿಕೋದ್ಯಮಿಗಳ ವಿಶೇಷ ಸಭೆ ಕರೆಯಬೇಕು (ಕೆಐಎಡಿಬಿ ಹೇಗೆ ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತದೋ) ಅದೇ ರೀತಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯಗಳನ್ನು ಈ ಪ್ರಾಧಿಕಾರ ಮಾಡಿಕೊಡಬೇಕು. ಈ ಬೃಹತ್ ಯೋಜನೆಯನ್ನು ರೂಪಿಸಿದ ನಂತರ ಎಸ್ಇಝೆಡ್ನಲ್ಲಿ ಜೋಡಿಸಬೇಕು - ಸೆಕ್ಟರ್ -೧: ಕಬ್ಬಿಣ, ಉಕ್ಕು, ಯಂತ್ರೋಪಕರಣಗಳು, ಮೋಟರ್ಸ್ ಮತ್ತು ಬಿಡಿಭಾಗಗಳು, ಕ್ಯಾಸ್ಟಿಂಗ್ ಘಟಕಗಳು, ರಕ್ಷಣಾ ಇಲಾಖೆಯ ಅಗತ್ಯ ವಸ್ತುಗಳ ತಯಾರಿಕಾ ಘಟಕಗಳು, ಸಿಮೆಂಟ್ ಕಂಪನಿ ಇತ್ಯಾದಿ ಪೂರಕ ಕಂಪನಿಗಳು.
- ಸೆಕ್ಟರ್ -೨: ಸಕ್ಕರೆ ಕಾರ್ಖಾನೆ, ಪೇಪರ್ ಕಾರ್ಖಾನೆ, ಇವುಗಳ ಬೈ-ಪ್ರಾಡಕ್ಟ್ಸ್, ಮೊಲಾಸಿಸ್ ಇತ್ಯಾದಿ ಪೂರಕ ಕಂಪನಿಗಳು ಮತ್ತು ಅರೆಕಾ ಪ್ರೋಸೆಸಿಂಗ್ ಮತ್ತು ಪೂರಕ ಕಂಪನಿಗಳು.
- ಸೆಕ್ಟರ್ -೩: ಐಟಿ-ಬಿಟಿ ಮತ್ತು ಪೂರಕ ಕಂಪನಿಗಳು.
ಸೆಕ್ಟರ್ -೪: ವಸತಿ ಸಮುಚ್ಛಯ ನಿರ್ಮಾಣದ ಕಂಪನಿಗಳು.
ಅ) ಬ್ಯಾಂಕ್ಗಳಿಗೆ ಕಟ್ಟಬೇಕಾಗಿರುವ ಸಾಲದ ಮರುಪಾವತಿ ಕಾರ್ಮಿಕರಿಗೆ ಕೊಡಬೇಕಾಗಿರುವ ಪರಿಹಾರದ ಮರುಪಾವತಿಯ ಜವಾಬ್ದಾರಿಯನ್ನು ವಿಶೇಷ ಪ್ರಾಧಿಕಾರಕ್ಕೆ ಕೊಡಬಹುದು.
ಇ) ಈ ಯೋಜನೆ ಕಾರ್ಯಗತವಾದರೆ ಲಕ್ಷಾಂತರ ಯುವಕ ಯುವತಿಯರಿಗೆ ಉದ್ಯೋಗ ದೊರಕುವುದು.
ಈ) ಸರ್ಕಾರಗಳಿಗೆ ಜಿಎಸ್ಟಿ ಮೂಲಕ ಕೋಟ್ಯಾಂತರ ಹಣ ತೆರಿಗೆ ರೂಪದಲ್ಲಿ ಬರುತ್ತದೆ.
ಉ) ಸುತ್ತಮುತ್ತಲಿನ ರೈತರ ಬದುಕು ಹಸನಾಗುತ್ತದೆ.
ಊ) ವಿಶ್ವ ಭೂಪಟದಲ್ಲಿ ಭದ್ರಾವತಿ ಪುನಃ ಸ್ಥಾನ ಪಡೆಯುತ್ತದೆ.
ಋ) ಸರ್.ಎಂ.ವಿಶ್ವೇಶ್ವರಯ್ಯನವರ ಶ್ರಮ ಸಾರ್ಥಕವಾಗುತ್ತದೆ.
ಭದ್ರಾವತಿ ನಗರಕ್ಕೆ ಕೇವಲ ೮-೧೦ ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಉತ್ತಮ ರೈಲ್ವೆ ವ್ಯವಸ್ಥೆ, ಉತ್ತಮ ಗುಣಮಟ್ಟದ ಹೈವೇ ನಿರ್ಮಾಣವಾಗಿದೆ. ಪಕ್ಕದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಇಝೆಡ್ನಲ್ಲಿ ಈಗಾಗಲೇ ಶಾಹಿ ಎಕ್ಸ್ಪೋರ್ಟ್ ಪಾರ್ಕ್ ನಿರ್ಮಿಸಿ ಸುಮಾರು ೧೦,೦೦೦ ಯುವಕ-ಯುವತಿಯರಿಗೆ ಉದ್ಯೋಗ ನೀಡಿದೆ ಎಂಬುದನ್ನು ಗಮನಿಸಬೇಕು.
ರಾಜ್ಯ ಸರ್ಕಾರದ ಸಹಕಾರದೊಂದಿಗೆ ಭಾರತದ ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಸಮ್ಮತಿ ದೊರೆತರೆ ಖಂಡಿತವಾಗಿ ಈ ಯೋಜನೆ ಕಾರ್ಯಗತ ಮಾಡಬಹುದು. ಆದ್ದರಿಂದ, ರಾಜಕೀಯವನ್ನು ಬದಿಗಿಟ್ಟು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಅತ್ಯಂತ ವಿನಮ್ರನಾಗಿ ಕೋರುತ್ತೇನೆ.