ಜಿಲ್ಲಾ ಸುದ್ದಿತಾಜಾ ಸುದ್ದಿ

ಸೊರಬ ತಾಲೂಕಿನ ಅತಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

Share Below Link

ಸೊರಬ : ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಎಲ್ಲೆಡೆ ಗಣೇಶ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಈ ನಡುವೆ “ಕುಬಟೂರು ಮಹಾರಾಜ” ಹೆಸರಿನ ಗಣಪ ಸಂಭ್ರಮದಲ್ಲಿ ಸುದ್ದಿಯಾಗಿದ್ದಾನೆ.
ಸೊರಬ ತಾಲೂಕಿನ ಸಚಿವರ ಸ್ವಗ್ರಾಮ ಕುಬಟೂರಿನಲ್ಲಿ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ 16 ಅಡಿ ಎತ್ತರದ ಗಣೇಶ ಮೂರ್ತಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ . ಮಧು ಬಂಗಾರಪ್ಪ ಅವರು ವಿಶೇಷ ಪೂಜೆ ಸಲ್ಲಿಸಿದರು.
ಈ ಗಣೇಶನನ್ನು ರಾಜಧಾನಿ ಬೆಂಗಳೂರಿನಿಂದ ಬರಮಾಡಿಕೊಳ್ಳಲಾಗಿದ್ದು, ಸೊರಬ ತಾಲೂಕಿನಲ್ಲಿಯೇ ಅತೀ ಎತ್ತರದ ಗಣೇಶ ಮೂರ್ತಿಯಾಗಿದ್ದು, ಗಣಪನ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಸಾವಿರಾರು ರೂಪಾಯಿ ವೆಚ್ಚದಲ್ಲಿ ಆಕರ್ಷಕವಾಗಿ ನಿರ್ಮಿಸಿರುವ ಮಂಟಪದಲ್ಲಿ, ರಾಜಗಾಂಭೀರ್ಯದಿಂದ ಸಿಂಹಾಸನದ ಮೇಲೆ ಕೂತು, ವಿವಿಧ ಕಲಾಕೃತಿಗಳಿಂದ ಕಂಗೊಳಿಸುತ್ತಿರುವ  ಈ ಗಣೇಶನನ್ನು ನೋಡಲು ಅಕ್ಕ- ಪಕ್ಕದ ತಾಲೂಕು ಹಾಗೂ ಗ್ರಾಮಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಇಡೀ ಗ್ರಾಮದ ಜನರು ಎಲ್ಲ ಜಾತಿ, ಜನಾಂಗದವರು ಪಾಲ್ಗೊಂಡು ಒಟ್ಟಿಗೆ ಸೇರಿ ಸಂತೋಷದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದು, ಭಕ್ತಾದಿಗಳ ಅಪೇಕ್ಷೆಯಂತೆ ಇನ್ನೂ ಸ್ವಲ್ಪ ದಿನಗಳ ಕಾಲ ಗಣೇಶನನ್ನು ಪೂಜಿಸಿ, ಸೆಪ್ಟೆಂಬರ್ 12 ರಂದು ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸೆ. 13ರಂದು ವಿವಿಧ ಸಾಂಸ್ಕೃತಿಕ ಮೆರವಣಿಗೆಗಳೊಂದಿಗೆ “ಕುಬಟೂರು ಮಹಾರಾಜ” ಗಣೇಶನನ್ನು ವಿಸರ್ಜಿಸಲಿದ್ದಾರೆ ಎಂದು ಗಣೇಶ ಮಂಡಳಿಯವರು ತಿಳಿಸಿದ್ದಾರೆ.