ಜಿಲ್ಲಾ ಸುದ್ದಿತಾಜಾ ಸುದ್ದಿ

ಧರ್ಮಪರಿಪಾಲನೆ ರಾಜನ ಕರ್ತವ್ಯ: ಶ್ರೀ ಸತ್ಯಾತ್ಮ ತೀರ್ಥರು

Share Below Link

ಹೊಳೆಹೊನ್ನೂರು : ಬರೀ ಸಿಂಹಾಸನದ ಮೇಲೆ ಕೂರುವುದು ರಾಜನ ಕರ್ತವ್ಯ ಅಲ್ಲ. ದೇಶದಲ್ಲಿ, ರಾಜ್ಯದಲ್ಲಿ ಅಥವಾ ತನ್ನ ರಾಜಧಿಕಾರದ ವ್ಯಾಪ್ತಿಯಲ್ಲಿ ಧರ್ಮಾಚರಣೆಗೆ ಇರುವ ಅಡ್ಡಿ ಆತಂಕಗಳನ್ನು ಪರಿಹಾರ ಮಾಡುವುದು ಆದ್ಯತೆಯ ಕರ್ತವ್ಯ ಆಗಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
ಮಂಗಳವಾರ ಸಂಜೆ ತಮ್ಮ ೨೮ನೇ ಚಾತುರ್ಮಾಸ್ಯದ ನಿಮಿತ್ತ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ರಾಜನಾದವನು ಸ್ವತಃ ಧರ್ಮಿಷ್ಟನಾಗಿರಬೇಕು. ತಾನು ಧರ್ಮವನ್ನು ಆಚರಿಸಬೇಕು. ಧರ್ಮಾಚರಣೆ ಮಾಡುವವರಿಗೆ ಸಹಕಾರಿಯಾಗಿರಬೇಕು. ಅವರನ್ನು ಪೋಷಿಸಬೇಕು. ಸಜ್ಜನ ಕಾರ್ಯಗಳಿಗೆ ದಾರಿ ಮಾಡಿಕೊಡ ಬೇಕು. ಪರೀಕ್ಷಿತ ಮಹರಾಜ ತಾನೂ ಧರ್ಮ ಮಾರ್ಗದಲ್ಲಿದ್ದು ತನ್ನ ಪ್ರಜೆಗಳಿಗೂ ಧರ್ಮ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದ ಕಾರಣ ಆತ ರಾಜ ಮತ್ತು ಋಷಿ ಯಾಗಿದ್ದ ರಾಜರ್ಷಿ ಎನಿಸಿದ್ದ ಎಂದರು.
ಶಾಪದಿಂದಾಗಿ ಕೇವಲ ಏಳು ದಿನಗಳ ಆಯುಷ್ಯವಿದೆ ಎಂದು ತಿಳಿದಾಗ ಆತ ಸ್ವೇಚ್ಛೆಯಿಂದ ಬದುಕಬಹುದಾಗಿತ್ತು. ಆದರೆ ಆತ ಸಾಧನೆಯ ಮಾರ್ಗ ಹಿಡಿದ. ಮೃತ್ಯು ಮುಂದೆ ಕಾದಿದೆ ಎಂದ ಸಂರ್ಭದಲ್ಲಿ ಪವಿತ್ರ ಗಂಗಾ ನದಿಯ ಸನ್ನಿಧಾನದಲ್ಲಿ ಸಾಕ್ಷಾತ್ ಶುಕಾಚಾರ್ಯರಿಂದಲೇ ಭಾಗವತ ಶ್ರವಣ ಮಾಡಿದ. ಈ ವೇಳೆ ರಾಜನೊಂದಿಗೆ ಸಹಸ್ರಾರು ಜನರೂ ಭಾಗವತ ಕೇಳಿ ಪುಣ್ಯವಂತ ರಾದರು. ಇಂತಹ ಧರ್ಮ ಮಾರ್ಗದ ರಾಜರಿದ್ದರೆ ಪ್ರಜೆಗಳೂ ಧರ್ಮ ಮಾರ್ಗವನ್ನು ಅನುಸರಿಸುತ್ತಾರೆ ಎಂದರು.
ಪೂಜ ಕಾಲದಲ್ಲಿ ಪಂಡಿತರಾದ ಮೋಹನಾಚಾರ್ಯ ಫಲಿಮಾರು, ಸಭಾ ಕಾರ್ಯಕ್ರಮ ದಲ್ಲಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ತಿರುಮಲಾ ಚಾರ್ಯ ಪ್ರವಚನ ನೀಡಿದರು. ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.
ವಿಶ್ವ ಮಾಧ್ವ ಮಹಾಪರಿಷತ್ ಸಭೆ: ವಿಶ್ವ ಮಧ್ವ ಮಹಾಪರಿಷತ್ ವಾರ್ಷಿಕ ಸಭೆ ಹೊಳೆಹೊನ್ನೂರಿನಲ್ಲಿ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪರಿಷತ್ ವತಿಯಿಂದ ಕೈಗೊಳ್ಳಲಾದ ಚಟುವಟಿಕೆಗಳ ವರದಿಯನ್ನು ಪರಿಷತ್‌ನ ಅಧ್ಯಕ್ಷ ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪರಿಷತ್ ವತಿಯಿಂದ ಹೊಸದಾಗಿ ಯುವಾತ್ಮ ಎಂಬ ಹೊಸ ಪರಿಯೊಂದಿಗೆ ಮಾಧ್ವ ಯುವ ಸಮುದಾಯಕ್ಕೆ ಧರ್ಮಾಚರಣೆಯ ಸರಳ ಮಾರ್ಗದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಯಶಸ್ವಿಯಾಗಿದೆ. ಇದನ್ನು ಹೀಗೇ ಮುಂದುವರೆಸಲು ನಿರ್ಧರಿಸಲಾಗಿದೆ ಎಂದರು.
ಮುಂದೆಯೂ ಕೂಡ ಪರಿಷತ್‌ನಿಂದ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಠದ ದಿವಾನರಾದ ಶಶಿ ಆಚಾರ್, ಜಿ ಮಠಾಧಿಕಾರಿ ಬಾಳಗಾರು ಜಯತೀರ್ಥಾ ಚಾರ್ಯ ಸೇರಿದಂತೆ ವಿವಿಧ ಜಿ ಘಟಕಗಳ ಪ್ರಮುಖರಿದ್ದರು.