ಮಕ್ಕಳಿಗಾಗಿ ಆಸ್ತಿ ಮಾಡದೆ ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ: ಸ್ವಾಮೀಜಿ
ಬಿ.ಆರ್.ಪ್ರಾಜೆಕ್ಟ್: ತಂದೆ ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡುವುದರ ಕಡೆ ಯೋಚಿಸದೇ, ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡುವುದರ ಕಡೆ ಗಮನಹರಿಸ ಬೇಕೆಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪೋಷಕರಿಗೆ ಕರೆ ನೀಡಿದರು.

ಅವರು ಇಂದು ಭದ್ರಾವತಿ ತಾಲ್ಲೂಕ್ ಶಾಂತಿನಗರದ ಬಿಜಿಎಸ್ ಕುವೆಂಪು ಸ್ಕೂಲ್ ನ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ‘ಬಿಜಿಎಸ್ ಫೆಸ್ಟ್ ೨೦೨೪-೨೫’ ರ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು. ಶಾಲೆಯಲ್ಲಿ ಮಕ್ಕಳು ಕೇವಲ ೬ ಘಂಟೆಗಳ ಕಾಲ ಮಾತ್ರ ಇದ್ದರೆ, ಮನೆಯಲ್ಲಿ ಸುಮಾರು ೧೮ ಘಂಟೆಗಳ ಕಾಲ ಇರುತ್ತಾರೆ. ಶಾಲೆಯಲ್ಲಿ ಆಧ್ಯಾತ್ಮಿಕಯುಕ್ತ ವಿದ್ಯೆ ಯನ್ನು ನೀಡುವುದರ ಜೊತೆಯಲ್ಲಿ ಕ್ರೀಡೆ, ವಿeನ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಶಾಲೆಯಲ್ಲಿ ಇರುವಷ್ಟು ಸಮಯ ತೊಡಗಿಸುವ ಕೆಲಸವನ್ನು ಶಾಲೆಯ ಶಿಕ್ಷಕರು ಮಾಡುತ್ತಾರೆ. ಆದರೆ ಪೋಷಕರು ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎಂಬುದು ಬಹು ಮುಖ್ಯ. ಜವಾಬ್ದಾರಿ ಮಕ್ಕಳನ್ನಾಗಿ ಮಾಡುವ ಹೊಣೆ ತಂದೆ ತಾಯಿಗಳಾದ್ದಗಿರುತ್ತದೆ. ಮನೆ-ಮನಸ್ಸಿಗೆ ಬೆಂಕಿ ಹಚ್ಚುವ ಧಾರವಾಹಿಗಳನ್ನು ನೋಡದಂತೆ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕೆಂದರು.
ಅಭಿಮನ್ಯು ತನ್ನ ತಾಯಿ ಗರ್ಭದಲ್ಲಿರುವಾಗಲೇ ಕೃಷ್ಣನ ಉಪದೇಶ ಕೇಳಿಸಿಕೊಂಡ ಎಂದಾದರೆ ಮಕ್ಕಳು ಹೊಟ್ಟೆಯಲ್ಲಿ ಇರುವ ಸಂದರ್ಭದಲ್ಲಿ ತಾಯಿಯಾದವರು ಟಿವಿಯಲ್ಲಿ ಕ್ರೈಂ ಸ್ಟೋರಿಗಳನ್ನು ನೋಡಿದರೆ ಆ ಮಗುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರು ತ್ತದೆ ಎಂಬುದನ್ನು ಆಲೋಚಿಸ ಬೇಕಾಗುತ್ತದೆ. ಗರ್ಭದಲ್ಲಿರುವಾಗ ಮಗು ಒಳ್ಳೆಯ ಮಾತುಗಳನ್ನು ಆಲಿಸಿದರೆ ಆ ಮಗು ವೀರ- ಶೂರನಾಗಿ ಬೆಳೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿ, ಭದ್ರಾವತಿ ತಾಲ್ಲೂಕು ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ಭದ್ರಾವತಿ ಗ್ರಾಮಾಂತರ ವಲಯ ಇನ್ಸ್ ಪೆಕ್ಟರ್ ಜಗದೀಶ್ ಹಂಚಿನಾಳ, ಎಂ.ರಮೇಶ್ ಶೆಟ್ಟಿ, ವಾಸಪ್ಪಗೌಡ, ಪ್ರಾಂಶುಪಾಲ ಆಶೋಕ್ ಇದ್ದರು.