ಜಿಲ್ಲಾ ಸುದ್ದಿತಾಜಾ ಸುದ್ದಿ

ದೇಶದ ಆರ್ಥಿಕತೆಗೆ ಫೌಂಡ್ರಿ ಉದ್ಯಮದ ಕೊಡುಗೆ ಅಪಾರ: ಪಾಲ್

Share Below Link

ಶಿವಮೊಗ್ಗ : ದೇಶದ ಆರ್ಥಿಕತೆಗೆ ಫೌಂಡ್ರಿ ಉದ್ಯಮದ ಕೊಡುಗೆ ಅಪಾರ ಎಂದು ಎಯುಎಂಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಸಪ್ಲೆ ಚೈನ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಸೌರೆನ್ ಪಾಲ್ ಹೇಳಿದರು.


ಮಲ್ನಾಡ್ ಶೈರ್ ಇಕೋ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ೬೩ನೇ ಐಐಎಫ್ ದಕ್ಷಿಣ ವಲಯದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಭಾರತ ಸರ್ಕಾರದ ಮುಂದಿನ ಅಭಿವೃದ್ಧಿ ಯೋಜನೆ ಗಳಿಂದ ಕೈಗಾರಿಕಾ ಉತ್ಪಾದನಾ ವಲಯಕ್ಕೆ ಉತ್ತಮ ಬೇಡಿಕೆ ಸೃಷ್ಟಿಯಾಗಲಿ ಎಂದು ತಿಳಿಸಿದರು.
ಕೈಗಾರಿಕಾ ಕ್ಷೇತ್ರದ ತಯಾರಿಕಾ ವಲಯದ ಸ್ಪರ್ಧಾತ್ಮಕತೆ, ಪರಿಣಾಮಕಾರಿ ವೆಚ್ಚದಲ್ಲಿ ಉತ್ಪಾದನೆ, ಉತ್ತಮ ಗುಣಮಟ್ಟದ ಕ್ಯಾಸ್ಟಿಂಗ್ ತಯಾರಿಕೆ ಹಾಗೂ ಸಕಾಲಕ್ಕೆ ಸರಬರಾಜು ಮಾಡುವ ಬದ್ಧತೆ ಬಗ್ಗೆ ಉದ್ಯಮಿಗಳು ಗಮನ ವಹಿಸಬೇಕು ಎಂದರು.
ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಮಾತನಾಡಿ, ದೇಶದ ಕೈಗಾರಿಕಾ ವಲಯದ ಬೆಳವಣಿಗೆಯಲ್ಲಿ ಐಐಎಫ್ ಮಹತ್ತರ ಪಾತ್ರ ವಹಿಸಿದ್ದು, ಐಐಎಫ್ ದಕ್ಷಿಣ ವಲಯದ ಹೊಸ ತಂಡ ದೇಶದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐಐಎಫ್ ದಕ್ಷಿಣ ವಲಯದ ೨೦೨೪-೨೫ನೇ ಸಾಲಿನ ಅಧ್ಯಕ್ಷರಾಗಿ ಶಿವಮೊಗ್ಗದ ವಿಜಯ್ ಟೆಕ್ನೋಕ್ರಾಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಜಿ.ಬೆನಕಪ್ಪ ಅಧಿಕಾರ ಸ್ವೀಕರಿಸಿ ಮಾತನಾಡಿ, ಸೇವೆ ಹಾಗೂ ಭವಿಷ್ಯದ ತಂತ್ರಜ್ಞಾನ, ಉತ್ಪಾದನೆಯಲ್ಲಿ ಹೊಸ ಪರಿಕಲ್ಪನೆ, ಫೌಂಡ್ರಿ ಉದ್ಯಮದ ಸದಸ್ಯರಿಗೆ ಸಹಕಾರಿಯಾಗುವ ತಾಂತ್ರಿಕ ಕಾರ್ಯಕ್ರಮಗಳು, ಹಸರೀಕರಣ, ಕಾರ್ಯಪದ್ಧತಿಯ ಸುಧಾರಣೆ, ರಫ್ತು ತರಬೇತಿ, ಯುವ ಉದ್ಯಮಿಗಳು/ವಿದ್ಯಾರ್ಥಿಗಳಿಗೆ ತಯಾರಿಕಾ ವಲಯಕ್ಕೆ ಆಕರ್ಷಿಸಲು ಪ್ರೇರಣೆ ನೀಡುವುದು, ಉದ್ಯೋಗಿ ಗಳಿಗೆ ಪ್ರತಿಭೆ, ಕಾರ್ಯತತ್ಪರತೆ ಹಾಗೂ ಸೃಜನಶೀಲತೆ ಹೆಚ್ಚಿಸಲು ಶಿಕ್ಷಣ ಮತ್ತು ತರಬೇತಿ, ಪ್ರಮಾಣ ಪತ್ರ ನೀಡುವುದು ಹಾಗೂ ಇನ್ನಿತರೆ ಉಪಯೋಗಿ ಕಾರ್ಯಕ್ರಮಗಳ ಮುಖಾಂತರ ಸದಸ್ಯರ ಸೇವೆಗೆ ಹಾಗೂ ಐಐಎಫ್ ಬೆಳವಣಿಗೆಗೆ ಪ್ರಯತ್ನ ಮಾಡಲು ಬದ್ಧ ಎಂದರು.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಹೈದ್ರಾಬಾದ್ ಹಾಗೂ ಕೇರಳದ ರಾಜ್ಯಗಳಿಂದ ೨೫೦ಕ್ಕೂ ಹೆಚ್ಚು ಕೈಗಾರಿಕಾ ಪ್ರತಿನಿಧಿಗಳು, ದಕ್ಷಿಣ ವಲಯದ ಹಾಗೂ ಶಾಖೆಗಳ ಮಾಜಿ ಅಧ್ಯಕ್ಷರು, ಶಿವಮೊಗ್ಗದ ಮಾಚೇನಹಳ್ಳಿ, ಸಾಗರ ರಸ್ತೆ ಮತ್ತು ಕಲ್ಲೂರು ಮಂಡ್ಲಿ ಕೈಗಾರಿಕಾ ವಸಹಾತುವಿನ ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿ ನಾಥ್, ವಸಂತ ಹೋಬಳಿ ದಾರ್, ಜಿ. ವಿಜಯ ಕುಮಾರ್, ಬಿ. ಗೋಪಿನಾಥ್, ರಮೇಶ್ ಹೆಗಡೆ, ಎಂ.ರಾಜು, ಡಿ.ಎಂ.ಶಂಕರಪ್ಪ, ಕೈಗಾರಿಕೋದ್ಯಮಿ ಎಸ್. ರುದ್ರೇ ಗೌಡ, ದಾಮೋದರ ಬಾಳಿಗ, ಎಂ. ರಾಜು, ಎಂ.ಹಾಲಪ್ಪ, ಡಿ.ಬಿ. ಅಶೋಕ್, ಡಿ.ಜಿ.ಬೆನಕಪ್ಪ, ಡಿ.ಜಿ. ಶಾಂತನಗೌಡ, ಐಐಎಫ್ ಶಿವಮೊಗ್ಗ ಚಾಪ್ಟರ್ ಅಧ್ಯಕ್ಷ ಎಂ.ವಿ. ರಾಘವೇಂದ್ರ, ಮಹಾವೀರ ಜೈನ್, ರೋಟರಿ ಸದ್ಯಸರು ಹಾಜರಿದ್ದರು.