ತಾಜಾ ಸುದ್ದಿಲೇಖನಗಳುಶಿಕ್ಷಣ

ಜೀವಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆ…

Share Below Link

ಆಧುನೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುದ್ಧಿಜೀವಿ ಮಾನವನು ತನ್ನ ಅತ್ಯಾಸೆಯ ತೆಕ್ಕೆಗೆ ಜೋತುಬಿದ್ದು ತನ್ನ ನೆರೆಹೊರೆಯ ಪ್ರಪಂಚವನ್ನು ಮರೆತೇ ಬಿಟ್ಟಿzನೆ ಎಂಬುದು ಸತ್ಯಾಂಶವಾಗಿದೆ. ಇಲ್ಲಿ ನಾನು ನೆರೆಹೊರೆಯ ಪ್ರಪಂಚ ಎಂದಿರುವುದು ಅಕ್ಕಪಕ್ಕದ ಮನೆಯವರನ್ನಲ್ಲ , ಬಂಧು ಬಳಗವನ್ನಲ್ಲ, ಹಿತೈಷಿ ಸ್ನೇಹಿತರನ್ನಲ್ಲ , ಒಬ್ಬರನ್ನೊಬ್ಬರು ಕಂಡಾಗ ಗೊಣಗುವ ಶತಗಳನ್ನಲ್ಲ, ಯಾವುದೇ ಸಂಬಂಧಿಕರನ್ನಲ್ಲ, ಬದಲಿಗೆ ನಮಗೂ – ಅವರೆಲ್ಲರಿಗೂ ನೆರೆಹೊರೆಯಾಗಿರುವ ಪರಿಸರವನ್ನು.
ಪರಿಸರ ಎಂದರೆ ನಮ್ಮ ಸುತ್ತ ಮುತ್ತಲಿನ ಜೈವಿಕ (ಜೀವವಿರುವ) ಮತ್ತು ಅಜೈವಿಕ ( ಜೀವವಿಲ್ಲದಿರುವ ) ಘಟಕಗಳ ಸಮೂಹವೇ ಆಗಿದೆ.


ಪರಿಸರವನ್ನು ಪ್ರಕೃತಿ , ನಿಸರ್ಗ ಎಂತಲೂ ಕರೆಯಲಾ ಗುತ್ತದೆ. ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿ ಪ್ರಕೃತಿಮಾತೆ , ನಿಸರ್ಗ ದೇವತೆ ಎಂದು ಪೂಜನೀಯ ಸ್ಥಾನವನ್ನು ಕಲ್ಪಿಸಲಾಗಿದೆ . ಹಾಗೆಂದೆ ನಮ್ಮ ಪೂರ್ವಜರು ಹಸು , ಆನೆ , ಹಾವು, ಹಲ್ಲಿ , ಕಪ್ಪೆ, ಗೂಳಿ , ಕತ್ತೆ , ಕುದುರೆ , ಕಾಗೆ , ಗರುಡ , ನವಿಲು , ಇಲಿ ಮುಂತಾದ ಪ್ರಾಣಿ ಪಕ್ಷಿಗಳನ್ನು ಪೂಜಿಸಿ ಆರಾಧಿಸುತ್ತಿದ್ದರು.
ಹಾಗೆಯೇ ಸೂರ್ಯ, ಚಂದ್ರ, ಆಕಾಶ , ಭೂಮಿ , ನೀರು , ಗಾಳಿ , ನಕ್ಷತ್ರ , ನವಗ್ರಹ, ಕಲ್ಲು , ಮಣ್ಣು , ಮುಂತಾದವೆಲ್ಲವುಗಳನ್ನು ಪೂಜಿಸಿ ಆರಾಧಿಸುತ್ತಿದ್ದರು.
ಇದು ಕೇವಲ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವಲ್ಲ . ಸಿಂಧೂ ಬಯಲಿನ ನಾಗರೀಕತೆಯ ಸಮಕಾಲೀನ ಸಂಸ್ಕೃತಿಗಳಾದ ಈಜಿಪ್ಟ್ , ಜಿಗ್ಗುರಾತ್ ಸಂಸ್ಕೃತಿ (ಮೆಸಪೊಟೇಮಿಯಾ ), ಷಿನ್ ಕಲ್ಚರ್ ( ಚೀನಾ ನಾಗರೀಕತೆ ) , ಅಜೆಟಿಕ್ ಮತ್ತು ಇಂಕಾ ನಾಗರೀಕತೆಗಳು ( ಅಮೇರಿಕ ಸಂಸ್ಕತಿ ) ಇಲ್ಲಿಯೂ ನಿಸರ್ಗಮಾತೆಯನ್ನು ಪೂಜಿಸಿ ಆರಾಧಿಸುತ್ತಿದ್ದರು.
ಆದರೆ ಇಂದು ಪರಿಸರ ಏನಾಗಿದೆ ? ಎಲ್ಲಿದೆ ? ನಮಗೇಕೆ ಪರಿಸರ ಅಗತ್ಯವಿದೆ ಎಂಬುದರ ಕುರಿತಾಗಿ ಸ್ವಲ್ಪ ಆಲೋಚಿಸಿ ಸ್ನೇಹಿತರೇ.
ಪ್ರಕೃತಿ ರಕ್ಷಿತೋ ರಕ್ಷಿತಃ ಅಂದರೆ ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ನಾವಿಲ್ಲದಿದ್ದರೂ ಪರಿಸರ ಉಳಿಯುತ್ತದೆ. ಆದರೆ ಪರಿಸರವಿಲ್ಲ ದಿದ್ದರೆ ನಮ್ಮ ಉಳಿವು ಅಸಾಧ್ಯ ಎಂಬುದನ್ನು ನಾವು ಮನಗಾಣಬೇಕಿದೆ.
ಇಂದು ಪರಿಸರದ ನಾಶವು ವಿಕೋಪದ ಹಂತವನ್ನು ತಲುಪಿದೆ. ಪ್ರಕೃತಿಮಾತೆ ಮುನಿಸಿ ಕೊಂಡಿzಳೆ. ಅದರ ಪರಿಣಾಮವೇ ಪ್ರಾಕೃತಿಕ ಕಾಲಗಳಲ್ಲಿ ವ್ಯತ್ಯಾಸವುಂಟಾಗಿದೆ. ಕಾಲಕಾಲಕ್ಕೆ ಮಳೆಯಿಲ್ಲ. ಭೂಮಿ ಬರಡಾಗಿ ಬರಗಾಲ ವಿಪರೀತ ವಾಗಿದೆ. ಕೆರೆ – ನದಿಗಳು ಬತ್ತಿ ಹೋಗಿವೆ. ಅದರ ಫಲಿತಾಂಶವೇ ಕುಡಿಯುವ ಮತ್ತು ಬಳಸುವ ನೀರಿಗೆ ಆಹಾಕಾರವೆದ್ದಿದೆ . ಗಿಡಮರಗಳ ಸಂಖ್ಯೆ ಕಡಿಮೆಯಾಗಿ ಮಳೆಯನ್ನೇ ಕಾಣದ ಭೂಮಿ ಬರಡಾಗಿದೆ. ಫಲವತ್ತತೆ ಕಡಿಮೆಯಾಗಿದೆ. ಜಲಕ್ಷಾಮ ಉಂಟಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯಗಳು ಚರ್ಚೆಯಾಗುತ್ತಿವೆ.


ಆದ್ದರಿಂದಲೇ ವಿಶ್ವ ಜಲ ದಿನ, ವಿಶ್ವ ಅರಣ್ಯ ದಿನ , ವಿಶ್ವ ಪರಿಸರ ದಿನ , ವಿಶ್ವ ಓಜೋನ್ ದಿನ , ವಿಶ್ವ ಹುಲಿ ದಿನ, ವಿಶ್ವ ವನ್ಯಜೀವಿಗಳ ದಿನ, ವಿಶ್ವ ಭೂಮಿಯ ದಿನ, ವಿಶ್ವ ಜಗು ಪ್ರದೇಶ ಸಂರಕ್ಷಣಾ ದಿನ, ವಿಶ್ವ ಆರೋಗ್ಯ ದಿನ, ವಿಶ್ವ ವಲಸೆ ಪಕ್ಷಿಗಳ ದಿನ, ವಿಶ್ವ ಜೀವ ವೈವಿಧ್ಯ ದಿನ, ವಿಶ್ವ ಸಾಗರ ದಿನ, ವಿಶ್ವ ಪರಮಾಣು ಬಾಂಬ್ ಪರೀಕ್ಷೆ ವಿರೋಧಿ ದಿನ, ವಿಶ್ವ ಮರುಭೂಮಿ ನಿರೋಧಕ ದಿನ, ವಿಶ್ವ ಹೊಗೆ ರಹಿತ ದಿನ, ವಿಶ್ವ ಬಿದಿರು ದಿನ, ವಿಶ್ವ ನೆಡುತೋಪು ಜಗತಿ ದಿನ, ವಿಶ್ವ ಹಸಿರು ಬಳಕೆದಾರರ ದಿನ, ವಿಶ್ವ ನದಿಗಳ ದಿನ, ವನ್ಯಜೀವಿ ಸಪ್ತಾಹ ದಿನಗಳು, ವಿಶ್ವ ಮಣ್ಣಿನ ದಿನ, ವಿಶ್ವ ಪರ್ವತ ದಿನ, ವಿಶ್ವ ಶಕ್ತಿ ಉಳಿತಾಯ ದಿನ, ಭೂಪಾಲ್ ದುರಂತ ದಿನ, ಹಿರೋಶಿಮಾ ದಿನ, ನಾಗಾಸಾಕಿ ದಿನ ಹೀಗೆ ದಿನಾಚರಣೆ ಗಳನ್ನು ವಿಶ್ವಸಂಸ್ಥೆಯು ಘೋಷಿಸಿದೆ.
ನಾವು ಈ ಮಹತ್ವದ ಮನುಕುಲದ ದಿನಗಳನ್ನು ಆಚರಿಸಬೇಕಾಗಿರುವುದು ಕಡ್ಡಾಯವಾಗಿದೆ. ಆ ಮೂಲಕ ಪರಿಸರ ಮತ್ತು ಜೀವಿಗಳ ಸಂರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ. ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ರಾಷ್ಟ್ರವೊಂದರ ಅರಣ್ಯ ಪ್ರದೇಶ ಆ ರಾಷ್ಟ್ರದ ಭೂ ವಿಸ್ತೀರ್ಣದ ಶೇ ೩೩. ರಷ್ಟು ಇರಬೇಕಿದೆ. ಉದಾಹರಣೆಗೆ ನಮ್ಮ ಭಾರತ ದೇಶವನ್ನೇ ತೆಗೆದುಕೊಂಡರೆ ನಮ್ಮ ಭೂ ವಿಸ್ತೀರ್ಣದ ಶೇ.೦೭ ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಹಾಗೆಂದಮೇಲೆ ಬರಗಾಲ , ಅತೀವೃಷ್ಠಿ , ಅನಾವೃಷ್ಠಿ , ಸಾಮಾನ್ಯ ಸಂಗತಿಯೇ ಆಗಿದೆ.
ಈ ನನ್ನ ವಿಶೇಷ ಲೇಖನವನ್ನು ನಿಮಗೆ ತಿಳಿಯಪಡಿಸುತ್ತಿರುವ ಉದ್ದೇಶ ಬೇರೇನೂ ಅಲ್ಲ , ನಾವು ಮನುಷ್ಯರು. ದಾಹವೆನಿಸಿದರೆ ಸಾಕು ನೀರನ್ನು ಎಲ್ಲಿಂದಲಾದರೂ ಹುಡುಕಿ ಕುಡಿಯುತ್ತೇವೆ. ಆದರೆ ಪ್ರತೀ ಕ್ಷಣ ನಮ್ಮೊಂದಿಗೆ ಜೀವಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಇಲ್ಲದೆ ಸಾವನ್ನಪ್ಪುತ್ತಿವೆ . ಉದಾಹರಣೆಗೆ ಗುಬ್ಬಿಗಳ ಸಂತತಿ ಪೂರ್ಣ ಪ್ರಮಾಣದಲ್ಲಿ ನಶಿಸಿ ಹೋಗುತ್ತಿದೆ. ಬರಗಾಲದ ಬಿಸಿಲಿನ ಧಗೆ , ನಿಸರ್ಗದ ಜೀವಿಗಳಿಗೆ ಹಗೆಯಾಗಿ ಹೊಗೆ ಹಾಕುವಂತಿದೆ . ಈ ಸಂದರ್ಭದಲ್ಲಿ ಮನುಷ್ಯತ್ವ ಮಾನವೀಯತೆಯನ್ನು ಮೆರೆಯಲು ಮಾನವನಿಗೆ ಸಿಕ್ಕಿರುವ ಸುಸಂದರ್ಭವನ್ನು ನಿರ್ಮಲವಾದ ಮನಸ್ಸಿನಿಂದ ಬಳಸಿಕೊಳ್ಳಬೇಕಿದೆ. ಮೊದಲು ನಾವು ಮನುಷ್ಯರಾಗಿ ಇಷ್ಟನ್ನಾದರೂ ಮಾಡೋಣ . ಇದು ಪ್ರಕೃತಿಯ ಉಳಿವಿಗೆ ನಮ್ಮ ಅಳಿಲು ಸೇವೆ ಎಂದು ಭಾವಿಸೋಣ.
ಅದೇನೆಂದರೆ; ನಮ್ಮ ಮನೆಗಳ ಛಾವಣಿಯ / ಆರ್.ಸಿ.ಸಿ.ಯ ಮೇಲೆ ಪಕ್ಷಿಗಳಿಗೆ ಕುಡಿಯಲು ನೀರನ್ನು ತಟ್ಟೆ , ತೆಂಗಿನಚಿಪ್ಪು , ಅಗಲವಾದ ಪಾತ್ರೆಗಳಲ್ಲಿ ಇಡೋಣ . ಈ ಕೆಲಸವನ್ನು ಕಟ್ಟುನಿಟ್ಟಾಗಿ ಪ್ರತಿದಿನ ಬೆಳಿಗ್ಗೆ ಮಾಡಲೇಬೇಕೆಂಬ ಕಡ್ಡಾಯ ನಿಯಮಕ್ಕೆ ಕಟಿಬದ್ಧರಾಗೋಣ. ಮನೆಯ ಮುಂಬಾಗಿಲು ಅಥವಾ ಹಿತ್ತಲಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರೆ ಒಳಿತು. ಈ ಭೂಮಿಯ ಮೇಲೆ ಬದುಕುತ್ತಿರುವ ಪ್ರಾಣಿ ಪಕ್ಷಿಗಳು ನಮ್ಮಂತೆಯೇ ಜೀವಿಗಳು ಎಂದು ಎಲ್ಲರೂ ತಿಳಿಯೋಣ .
ಒಟ್ಟಾರೆಯಾಗಿ ದಾಹದಿಂದ ಮತ್ತು ಹಸಿವಿನಿಂದ ಬಳಲುತ್ತಿರುವ ಎ ಜೀವಿಗಳಿಗೂ ನೀರು ಮತ್ತು ಆಹಾರ ಸಿಗುವಂತಾಗಲಿ , ಹಸಿರೇ ಉಸಿರು , ಉಸಿರಿಗೆ ಹಸಿರೇ ಜೀವಾಳ. ಇದು ದಯೆ ಮತ್ತು ಧರ್ಮವಾಗಿದೆ. ದಯವೇ ಧರ್ಮದ ಮೂಲವಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದು ಜಗಜ್ಯೋತಿ ಬಸವಣ್ಣ ನವರು ಹೇಳಿzರೆ. ಈ ಪ್ರಕೃತಿ ಮಾತೆ ಎಲ್ಲರನ್ನೂ ಹರಸಲಿ, ಇಡೀ ವಿಶ್ವಕ್ಕೆ ಒಳಿತಾಗಲಿ. ಸರ್ವೇ ಜನಃ ಸುಖಿನೋ ಭವಂತು. ಎಲ್ಲರೂ ಪ್ರಾಣಿ ಪಕ್ಷಿಗಳಿಗೆ ನೀರಿಡಿ. ಅವು ನೀರು ಕುಡಿದು ತಮ್ಮ ದಾಹ ಇಂಗಿಸಿಕೊಳ್ಳಲಿ, ನೂರಾರು ವರ್ಷಗಳ ಕಾಲದ ಬದಕಲಿ. ಇದು ನಮಗೆ ಪುಣ್ಯಕಾರ್ಯಗಳಾಗುತ್ತವೆ.

ಕೆ.ಎನ್.ಚಿದಾನಂದ. ಹಾಸನ.