ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೋರ್ಟ್ ತೀರ್ಪು: ವಾಜಪೇಯಿ ಲೇಔಟ್‌ನ 175 ಸೈಟ್ ರದ್ದಿಗೆ ನೋಟೀಸ್…

Share Below Link

ಶಿವಮೊಗ್ಗ : ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ೨೦೦೯ -೧೦ನೇ ಸಾಲಿನಲ್ಲಿ ನಗರದ ಹೊರವಲಯ ಮಲ್ಲಿಗೇನಹಳ್ಳಿಯಲ್ಲಿ ಸಾರ್ವಜನಿಕ ವಿತರಣೆಗಾಗಿ ಸುಮಾರು ೧೭೨ ಎಕರೆ ಪ್ರದೇಶದಲ್ಲಿ ಸೃಜಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಆಗಿರಬಹುದಾದ ಲೋಪಗಳ ಪರಿಹಾರಕ್ಕಾಗಿ ೨೦೨೩ರ ಆಗಸ್ಟ್ ಮಾಹೆಯಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ೧೭೫ ನಿವೇಶನಗಳ ರದ್ದು ಮಾಡಿ ನೋಟಿಸ್ ನೀಡಲಾಗಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎನ್. ಸುಂದರೇಶ್ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩೧೮ ನಿವೇಶನಗಳ ಹಂಚಿಕೆ ಲೋಪದ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯಾಲಯದ ತೀರ್ಪಿನಂತೆ ಸೂಡಾದಲ್ಲಿ ಸೇವೆ ಸಲ್ಲಿಸುತ್ತಿರುವ ೧೭ ಸಿಬ್ಬಂಧಿಗಳು ಸೇರಿದಂತೆ ಅಧ್ಯಕ್ಷರ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ ೧೪೨ ಜನರು ಮತ್ತು ಪತಿ-ಪತ್ನಿ ಪ್ರಕರಣಗಳಲ್ಲಿ ಆಯ್ಕೆ ಗೊಂಡಿದ್ದ ೧೬ ಫಲಾನುಭವಿಗಳಿಗೆ ನೋಟೀಸ್ ನೀಡಲಾಗಿದೆ ಎಂದರು.
ನ್ಯಾಯಾಲಯದ ಈ ಆದೇಶಕ್ಕೆ ಮೊದಲು ಲೋಕಾಯುಕ್ತರ ತನಿಖಾ ವರದಿಯ ನಂತರ ಪ್ರಾಧಿಕಾರದ ಸಭೆಯ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ಸಮಿತಿಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಅರ್ಹರನ್ನು ಆಯ್ಕೆ ಮಾಡಲಾಗಿತ್ತು. ಕೆಲವು ಸೌಲಭ್ಯ ವಂಚಿತ ಅರ್ಜಿದಾರರು ಹಲವು ನಿಯಮಗಳನ್ನು ಉಲ್ಲಂಘಿಸ ಲಾಗಿರುವ ಬಗ್ಗೆ ಉಚ್ಚ ನ್ಯಾಯಾಲದ ಯಲ್ಲಿ ಪ್ರಶ್ನಿಸಿದ್ದರು. ಸದರಿ ಪ್ರಕರಣದಲ್ಲಿ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ನೀಡಿದ ತೀರ್ಪಿನಂತೆ ಪ್ರಸ್ತುತ ಕ್ರಮ ವಹಿಸಲಾಗುತ್ತಿದೆ ಎಂದರು.
ವಾಜಪೇಯಿ ಬಡಾವಣೆಯಲ್ಲಿ ೧೮೦೧ನಿವೇಶನಗಳನ್ನು ಸೃಜಿಸಲಾಗಿದೆ. ಈ ನಿವೇಶನಗಳಲ್ಲಿ ೨೧೭ ನಿವೇಶನ ಗಳನ್ನು ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ. ೨೫೦ಮೂಲೆ ನಿವೇಶನಗಳನ್ನು ಕಾಯ್ದಿರಿಸಲಾಗಿದೆ. ೧೯ ನಿವೇಶನಗಳನ್ನು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ದವರಿಗೆ ಸರ್ಕಾರದ ಆದೇಶದಂತೆ ವಿತರಿಸಲಾಗಿದೆ. ಭೂಮಾಲೀಕರಿಗೆ ನಿವೇಶನ ರೂಪದ ಪರಿಹಾರ ಪಡೆಯದೇ ನಗದು ರೂಪದ ಪರಿಹಾರ ಪಡೆದಾಗ ಉಳಿದ ೧೪೨ ನಿವೇಶನಗಳನ್ನು ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿತ್ತು ಎಂದರು.
ನಿವೇಶನ ಹಂಚಿಕೆ: ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಭದ್ರಾವತಿಯಲ್ಲಿ ೩೪ ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಊರು ಗಡೂರು ಪ್ರದೇಶದಲ್ಲಿ ಈಗಾಗಲೇ ಶೇ.೮೫ ಕಾಮಗಾರಿ ಪೂರ್ಣ ಗೊಂಡಿದ್ದು, ಸುಮಾರು ೬೮೭ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು ಎಂದರು.
ಸಭೆಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಇಂಜಿನಿಯರ್ ಬಸವರಾಜ್ ಮತ್ತಿತರರಿದ್ದರು.