ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಪೂಜ್ಯಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಸ್ತಂಗತ…

Share Below Link

ಸಾಸ್ವೆಹಳ್ಳಿ: ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಹೋಬಳಿಯ ಹೊಟ್ಯಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ(೬೦) ಜು.೨೪ರ ನಿನ್ನೆ (ಸೋಮವಾರ) ಬೆಳಿಗ್ಗೆ ಅನಾರೋಗ್ಯದಿಂದ ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ಲಿಂಗೈಕ್ಯರಾದರು.
ಹೊನ್ನಾಳಿ ತಾಲೂಕಿನ ಹಿರೇಕಲ್ಮಠ. ರಾಂಪುರ ಹಾಲಸ್ವಾಮಿ ಮಠಗಳೊಂದಿಗೆ ಗುರುತಿಸಿ ಕೊಂಡಿದ್ದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜೀಗಳು ಯಕೃತ್ ಲಿವರ್ ವೈಫಲ್ಯದ ಕಾರಣ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಚಿಕಿತ್ಸೆಗಾಗಿ ಜು.೧೦ರಂದು ಆಸ್ಪತ್ರೆಗೆ ದಾಖಾಲಾಗಿದ್ದರು. ಅವರ ಆರೋಗ್ಯ ದಿನೇದಿನೆ ಕ್ಷೀಣವಾಗ ತೊಡಗಿತು.ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಅಂತಿಮ ಉಸಿರೆಳೆದರು.
ಉಜ್ಜಯಿನಿ ಶಾಖಾ ಹಿರೇಮಠವಾಗಿರುವ ಪುತ್ರವರ್ಗದ ಮಠವಾಗಿರುವ ಈ ಮಠದಲ್ಲಿ ಮಾರ್ಚ್ ೨೪, ೨೦೦೨ರಂದು ಉಜ್ಜಯಿನಿ ಜಗದ್ಗುರು ಮರುಳ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜೀ ಯವರ ಸಾನಿಧ್ಯದಲ್ಲಿ ಹೊನ್ನಾಳಿ ಹಿರೆಕಲ್ಮಠದ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ರಾಂಪುರ ಹಾಲಸ್ವಾಮಿ, ಮಠದ ಸದ್ಗುರು ಶಿವಯೋಗಿ ಹಾಲಸ್ವಾಮಿ ಮತ್ತು ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಇವರುಗಳ ನೇತೃತ್ವದಲ್ಲಿ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳಾಗಿ ಪಟ್ಟಾಧಿಕಾರ ಹೊಂದಿದ್ದರು.
ಗ್ರಾಮದ ಚಂದ್ರಶೇಖರಯ್ಯ ಹಾಗೂ ಪಾರ್ವತಮ್ಮನವರ ದ್ವಿತೀಯ ಸುಪುತ್ರರಾಗಿ ೧೯೬೩ರ ಜೂನ್ ೩ರಂದು ಜನಿಸಿದ ಪೂಜ್ಯರ ಮೂಲ ಹೆಸರು ಸತೀಶ್. ದೇವರು ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿ, ಧಾರ್ಮಿಕ ವಿಧಿ ವಿಧಾನಗಳನ್ನು ಹೊನ್ನಾಳಿ ಹಿರೇಕಲ್ಮಠ ಮತ್ತು ಧಾರವಾಡದ ಮುರುಘಾಮಠದಲ್ಲಿ ತರಬೇತಿಯನ್ನು ಪಡೆದಿದ್ದರು.
೨೦೦೨ರ ಮಾರ್ಚ್೨೪ ರಂದು ಪಟ್ಟಾಧಿಕಾರ ಹೊಂದಿದ್ದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಯವರು, ರಾಂಪುರ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಹಾಲಸ್ವಾಮಿ ಮತ್ತು ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ನಡುವೆ ಅವಿನಾಭಾವ ಸಂಬಂಧ ಹೊಂದಿದ್ದ ಸ್ವಾಮಿ ವಿಶ್ವೇಶ್ವರ ಶಿವಾಚಾರ್ಯ ಸ್ವಾಮಿಗಳೊಂದಿಗೆ ಜೋಡೆತ್ತು ಗಳಂತೆ ಯಾವುದೇ ಸಭೆ, ಸಮಾರಂಭಗಳಲ್ಲಿ ಮುಂಚೂಣಿ ಯಲ್ಲಿ ಒಂದೇ ಸಮವಸ್ತ್ರದಲ್ಲಿ ಸಾನಿಧ್ಯವಹಿಸುತ್ತಿದ್ದರು.
೨೦೨೦ರಲ್ಲಿ ರಾಂಪುರ ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಕೊರೋನದಿಂದ ಲಿಂಗೈಕರಾದ ಹಿನ್ನಲೆಯಲ್ಲಿ ಅವರ ನೆನಪಿನಿಂದ ಮಂಕಾಗಿದ್ದು, ೩ನೇ ವರ್ಷದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ಮುಗಿಸಿದ ನಂತರ ಆಸ್ಪತ್ರೆಗೆ ದಾಖಲಾದವರು ಪುನಃ ಲಿಂಗೈಕ್ಯ ಪಾರ್ಥಿವ ಶರೀರ ಮಠಕ್ಕೆ ಸೋಮವಾರ ಬಂದಿದ್ದು ಭಕ್ತ ವರ್ಗಕ್ಕೆ ತುಂಬಲಾರದ ನಷ್ಟವುಂಟಾಗಿದೆ.
ಅಂತಿಮ ದರ್ಶನ ಪಡೆದ ಯಡಿಯೂರು ರೇಣುಕ ಶಿವಾಚಾರ್ಯ, ವಿಜಯಪುರ ಜಿಯ ಹಿರೇಹಡಗಲಿ ಮಠದ ಹಾಲಸ್ವಾಮಿ, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ರೇಣುಕಚಾರ್ಯ, ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ಮಾಜಿ ಮೆಸ್ಕಾಂ ನಿರ್ದೇಶಕ ಎಸ್.ರುದ್ರೇಶ್ ಹೊಸೂರು ಸೇರಿದಂತೆ ಹಲವು ಮಠಾಧಿಪತಿಗಳು ದರ್ಶನ ಪಡೆದರು. ಶ್ರೀಗಳ ಕ್ರಿಯಾ ಸಮಾಧಿ ಜು.೨೫ರ ಇಂದು (ಮಂಗಳವಾರ) ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಸಂತಾಪ: ಸಾಸ್ವೆಹಳ್ಳಿ ಹೋಬಳಿಯ ಹೊಟ್ಯಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ನಿಧನಕ್ಕೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪೂಜ್ಯಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು, ಶಿವಮೊಗ್ಗ ಕಥೋಲಿಕ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೋ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಸಂಸದರಾದ ಸಿದ್ದೇಶ್ವರ್, ಬಿ.ವೈ. ರಾಘವೇಂದ್ರ, ಮಾಜಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಎಂ.ಪಿ. ರೇಣುಕಾಚಾರ್ಯ, ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಶಾಸಕರಾದ ಡಿ.ಜಿ. ಶಾಂತನಗೌಡರು, ಬಿ.ವೈ. ವಿಜಯೇಂದ್ರ, ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಶಾರದಾ ಪೂರ್‍ಯಾನಾಯ್ಕ, ರಾಜ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಪಿ.ಎಂ. ಷಣ್ಮುಖಯ್ಯ ಮತ್ತು ಪದಾಧಿಕಾರಿಗಳು ಸೇರಿದಂತೆ ಹಲ ಗಣ್ಯಾತಿಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.